ನವದೆಹಲಿ, ಫೆ.8 (ರಾಜ್ಯಸಭೆ)- ಕೃಷಿ ಕಾಯ್ದೆಯ ಬಗ್ಗೆ ಕೆಲವರು ರಾಜಕೀಯ ಮಾಡಿ ದೇಶದ ಜನರ ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ಕೃಷಿ ಬದಲಾವಣೆ ಅಗತ್ಯವಾಗಿದ್ದು , ಅನ್ನದಾತರಿಗೆ ಎಲ್ಲಾ ರೀತಿಯ ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಅಭಯ ನೀಡಿದ್ದಾರೆ. ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿಗಳು ಮಾಡಿದ ವಂದನಾರ್ಪಣೆ ಭಾಷಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿಪಕ್ಷಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ರಾಷ್ಟ್ರ ಮತ್ತು ಸಂಸದರನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಅವರ ಮಾತುಗಳನ್ನು ಎಲ್ಲರೂ ಆಲಿಸಿದ್ದರೆ ಚೆನ್ನಾಗಿತ್ತು. ನಾವು ಪರಿಚಯಿಸಿರುವ ನೂತನ ಕೃಷಿ ಕಾಯ್ದೆಗಳ ಬಗ್ಗೆ ರೈತರಲ್ಲಿ ಪ್ರತಿಪಕ್ಷಗಳು ಗೊಂದಲ ಉಂಟು ಮಾಡುತ್ತಿವೆ. ಅನ್ನದಾತರಿಗೆ ತಪ್ಪು ತಿಳುವಳಿಕೆ ನೀಡಿ ದಾರಿ ತಪ್ಪಿಸುತ್ತಿರುವುದು ಕಂಡು ಬರುತ್ತಿದೆ. ಆದರೆ, ಮಾಜಿ ಪ್ರಧಾನಿ ದೇವೇಗೌಡರಿಗೆ ನಾನು ಅಭಾರಿಯಾಗಿದ್ದೇನೆ. ದೇವೇಗೌಡ ಜೀವನ ರೈತರಿಗೆ ಅರ್ಪಿತವಾಗಿದ್ದು, ಅವರು ನಮಗೆ ಉತ್ತಮ ಸಲಹೆಗಳನ್ನು ನೀಡಿದ್ದಾರೆ ಎಂದು ದೇವೇಗೌಡರ ಬಗ್ಗೆ ಮೋದಿ ಅವರು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು.