ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದಲ್ಲಿ ಊಹೆ ಮಾಡಲಾಗದಷ್ಟು ದೊಡ್ಡ ಹಗರಣ ನಡೆದಿದೆ. ಇನ್ನು ಮೂರುನಾಲ್ಕು ತಿಂಗಳಲ್ಲಿ ಅದೆಲ್ಲವನ್ನೂ ಹೊರಹಾಕಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಗಳವಾರ ವಿಧಾನಸಭೆಗೆ ಭರವಸೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾರ್ಪಣೆ ಚೆರ್ಚೆಯ ವೇಳೆ ಬಿಡಿಎ ವಿಚಾರ ಪ್ರಸ್ತಾಪವಾದಾಗ ಸಿಎಂ ಯಡಿಯೂರಪ್ಪ ಅವರು ಈ ಭರವಸೆ ನೀಡಿದ್ದಾರೆ.
ನಾನೇ ಖುದ್ದಾಗಿ ಹೋಗಿ ಬಿಡಿಎ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದು, ಎರಡು ತಿಂಗಳಿಗೊಮ್ಮೆ ಪರಿಶೀಲನೆ ಮಾಡುವುದಾಗಿ ಹೇಳಿದ್ದೇನೆ. ಅಲ್ಲಿ ಸಾಕಷ್ಟು ಅವ್ಯವಹಾರ ಇದೆ. ಎಲ್ಲಕ್ಕೂ ಕಡಿವಾಣ ಹಾಕುತ್ತೇನೆ. ಅಂತವರು ಯಾರೇ ಇದ್ದರೂ ವರ್ಗಾವಣೆ ಮಾಡಲು ಸೂಚಿಸಿದ್ದೇನೆ ಎಂದರು.
ನೀವು ನೋಡುತ್ತಿರಿ, ಇನ್ನು ನಾಲ್ಕೈದು ತಿಂಗಳಲ್ಲಿ ನಿಶ್ಚಿತವಾಗಿ ಎಲ್ಲ ಅವ್ಯವಹಾರ ತಡೆಗೆ ಶಕ್ತಿ ಮೀರಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅದಕ್ಕೆ ತಮ್ಮೆಲ್ಲರ ಸಹಕಾರ ಬೇಕು. ಸಾವಿರಾರು ಸೈಟು ಹರಾಜು ಮಾಡಿದ್ದೇವೆ. ಸೈಟು ಮುಚ್ಚಿಟ್ಟ ಅನೇಕ ಪ್ರಕರಣ ಹೊರಗೆ ತಂದಿದ್ದೇವೆ. ದೊಡ್ಡ ಪ್ರಮಾಣದ ಅವ್ಯವಹಾರ ಆಗಿದೆ. ಅಕ್ರಮ ನಡೆಯುತ್ತಿದೆ. ನಾನೇ ಕೇಳಿದರೂ ಅಧಿಕಾರಿಗಳು ಮಹಿತಿ ಕೊಡಲಿಲ್ಲ. ಅಧಿಕಾರಿಗಳೇ ಸೈಟುಗಳನ್ನು ಮುಚ್ಚಿಡುತ್ತಾರೆ ಎಂದರು.
ನನಗೆ ಕೊಟ್ಟ ಜಿ ಕೆಟಗರಿ ಸೈಟ್ನಲ್ಲಿ ಇನ್ನೂ ಮನೆ ಕಟ್ಟಲು ಆಗಿಲ್ಲ. ನನ್ನ ಸೈಟ್ಗೆ ಯಾರೋ ನಕಲಿ ದಾಖಲೆ ಕೊಟ್ಟು ವ್ಯಾಜ್ಯ ಶುರು ಮಾಡಿದ್ದಾರೆ. ಹೀಗಾಗಿ ನನಗೆ ಇನ್ನೂ ಸೈಟ್ ಸಿಕ್ಕಿಲ್ಲ. ಬಿಡಿಎನಲ್ಲಿ ಇಂತಹ ಅಕ್ರಮಗಳು ನಡೆಯುತ್ತಿದೆ ಎಂದು ಸ್ವಪಕ್ಷೀಯ ಶಾಸಕ ಅರಗ ಜ್ಞಾನೇಂದ್ರ ಅವರು ಆರೋಪಿಸಿದರು.
ಆರೋಪಕ್ಕೆ ಉತ್ತರಿಸಿದ ಸಿಎಂ, ಬಿಡಿಎನಲ್ಲಿ ಸುಧಾರಣೆ ತರಲು ಈಗಾಗಲೇ ಪ್ರಯತ್ನ ಮಾಡುತ್ತಿದ್ದೇನೆ. ಸೈಟ್ಗಳಿಗೆ ದಾಖಲೆ ಇಲ್ಲದಂತಹ ಪರಿಸ್ಥಿತಿ ಇರೋದು ಗೊತ್ತಿದೆ. ಅಧಿಕಾರಿಗಳ ಸಾಮೂಹಿಕ ವರ್ಗಾವಣೆಗೆ ಸಹ ಕ್ರಮ ಕೈಗೊಳ್ಳಲಾಗಿದೆ ಎಂದರು.