ಬೆಂಗಳೂರು(ಫೆ. 02): ಫೇಸ್ಬುಕ್ನಲ್ಲಿ ಯುವತಿಯ ಪರಿಚಯ ಮಾಡಿಕೊಂಡು ಸಾವಿನ ನಾಟಕವಾಡಿ ಮೊಬೈಲ್ ನಂಬರ್ ಪಡೆದು ಇನ್ನಿಲ್ಲದಂತೆ ಪೀಡಿಸಿದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಯುವತಿ ನೀಡಿದ ದೂರಿನ ಮೇರೆಗೆ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ಶ್ರವಣ್ ಕುಮಾರ್ ಎಂಬ ಆರೋಪಿಯನ್ನ ಬಂಧಿಸಿದ್ದಾರೆ. ತನ್ನ ಮೇಲೆ ಈತನಿಂದ ಲೈಂಗಿಕ ಹಲ್ಲೆ, ಮಾನಸಿಕ ಕಾಟ ಆಗಿದೆ ಎಂದು ಯುವತಿ ಜನವರಿ 29ರಂದು ನೀಡಿದ ತನ್ನ ದೂರಿನಲ್ಲಿ ಆರೋಪಿಸಿದ್ದಾಳೆ.
ಘಟನೆ ಏನು?
ಯುವತಿ ನೀಡಿರುವ ದೂರಿನ ಪ್ರಕಾರ ಆರೋಪಿ ಶ್ರವಣ್ ಕುಮಾರ್ ಮೂರು ವರ್ಷಗಳ ಹಿಂದೆ ಫೇಸ್ಬುಕ್ನಲ್ಲಿ ಪರಿಚಯ ಆಗುತ್ತಾನೆ. ತಾನು ಜಾಸ್ತಿ ದಿನ ಬದುಕುವುದಿಲ್ಲ. ತನಗೆ ಮೂಗು ಬಾಯಲ್ಲಿ ರಕ್ತ ಬರುತ್ತದೆ ಎಂದು ಹೇಳಿ ಕನಿಕರ ಹುಟ್ಟುವಂತೆ ಮಾತನಾಡಿ ಸ್ನೇಹ ಬೆಳೆಸಿಕೊಂಡು ಮೊಬೈಲ್ ನಂಬರ್ ಪಡೆದುಕೊಳ್ಳುತ್ತಾನೆ. ಆ ನಂತರ ಆಕೆಯೊಂದಿಗೆ ವಾಟ್ಸಾಪ್ ಮತ್ತು ಫೇಸ್ಬುಕ್ ಚಾಟಿಂಗ್ ಮಾಡುತ್ತಿರುತ್ತಾನೆ. 2020, ಫೆಬ್ರವರಿಯಿಂದ ಶ್ರವಣ್ ಕುಮಾರ್ ಆ ಯುವತಿ ಜೊತೆ ಸೆಕ್ಸ್ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ಪ್ರಾರಂಭಿಸುತ್ತಾನೆ. ಅದಾದ ಬಳಿಕ ಯುವತಿ ಆತನ ನಂರನ್ನ ಬ್ಲಾಕ್ ಮಾಡಿ ಆತನ ಸಂಪರ್ಕ ಕಟ್ ಮಾಡುತ್ತಾಳೆ. ಆದರೂ ಸುಮ್ಮನಾಗದ ಶ್ರವಣ್ ಕುಮಾರ್ ಬೇರೆ ನಂಬರ್ಗಳಿಂದ ಪದೇ ಪದೇ ಕರೆ ಮಾಡುತ್ತಿರುತ್ತಾನೆ. ಒಂದು ರಾತ್ರಿ ನನ್ನ ಪಕ್ಕ ಮಲಗಿದರೆ ಬಿಟ್ಟು ಬಿಡುತ್ತೇನೆ ಎಂದು ಅಶ್ಲೀಲವಾಗಿ ಮಾತನಾಡುತ್ತಿರುತ್ತಾನೆ. ನಿನ್ನನ್ನ ಪ್ರೀತಿಸುತ್ತಿದ್ದೇನೆ. ನೀನು ರಿಜೆಕ್ಟ್ ಮಾಡಿದರೆ ನಿನ್ನನ್ನು ಕೊಲೆ ಮಾಡುತ್ತೇನೆ. ನಂತರ ನಾನೂ ಸಾಯುತ್ತೇನೆ ಎಂದು ಬೆದರಿಸುತ್ತಿರುತ್ತಾನೆ. ಮನೆಯವರಿಗೆ ಈ ವಿಚಾರ ತಿಳಿಸುತ್ತೇನೆಂದು ಯುವತಿ ಹೇಳಿದರೂ ಜಗ್ಗದ ಆತ, ಏನೇ ಆದರೂ ಬಿಡುವುದಿಲ್ಲ, ನಿನ್ನನ್ನು ಸಾಯಿಸುತ್ತೇನೆ. ಏನಾದರೂ ಆಗಲಿ ಎಂದು ಎಚ್ಚರಿಕೆ ಕೊಟ್ಟಿರುತ್ತಾನೆ ಎಂದು ಯುವತಿ ಆರೋಪ ಮಾಡಿದ್ದಾಳೆ.