ವಿಜಯಪುರ: ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಗುಂಡು, ತುಂಡು ಪಾರ್ಟಿ ನಡೆದ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮುಳವಾಡ ಗ್ರಾಮದಲ್ಲಿ ನಡೆದಿದೆ.
ಕಳೆದ ರಾತ್ರಿ ಕ್ಲಾಸ್ 1 ಗುತ್ತಿಗೆದಾರನೊಬ್ಬ ಮುಳವಾಡ ಪ್ರವಾಸಿ ಮಂದಿರದಲ್ಲಿ ಪೆಂಡಾಲ್ ಹಾಕಿಸಿ ಭರ್ಜರಿಯಾಗಿ ಗುಂಡು ತುಂಡು ಪಾರ್ಟಿ ನಡೆಸಿದ್ದಾನೆ. ಈ ಪಾರ್ಟಿಯಲ್ಲಿ ಅನೇಕ ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ 200ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಪಾರ್ಟಿಯಲ್ಲಿ ಎಣ್ಣೆ, ಮಾಂಸದೂಟ ಎಲ್ಲವೂ ರಾಜಾರೋಷವಾಗಿ ನಡೆದಿದೆ.
ಪ್ರವಾಸಿ ಮಂದಿರದಲ್ಲೇ ಅಡುಗೆ ಮಾಡಲಾಗಿದ್ದು, ಉಳ್ಳವರು ಇಲ್ಲಿ ಏನು ಮಾಡಿದರೂ ಹೇಳೋರಿಲ್ಲ, ಕೇಳೋರಿಲ್ಲದಂತಾಗಿದೆ. ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 218ರ ಪಕ್ಕದಲ್ಲಿರುವ ಐಬಿಯಲ್ಲೇ ಇಷ್ಟೊಂದು ರಾಜಾರೋಷವಾಗಿ ದರ್ಬಾರ್ ನಡೆಸಿದರೂ ಸರ್ಕಾರಿ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಪ್ರಥಮ ದರ್ಜೆಯ ಗುತ್ತಿಗೆದಾರನಿಗೆ ಐಬಿಯನ್ನೇ ಅಧಿಕಾರಿಗಳು ಬರೆದು ಕೊಟ್ರಾ..? ಸರ್ಕಾರಿ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ ಗುತ್ತಿಗೆದಾರ ವಿರುದ್ಧ ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿದೆ ಲೋಕೋಪಯೋಗಿ ಇಲಾಖೆ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ.