ಆಲೂರು: ಒಂಟಿ ಸಲಗವನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಯುತ್ತಿರುವಾಗಲೇ ಬೈಕ್ ಸವಾರನೊಬ್ಬ ಕೂದಲೆಳೆ ಅಂತರ ದಲ್ಲಿ ಕಾಡಾನೆಯಿಂದ ಪಾರಾದ ಘಟನೆ ತಾಲೂಕಿನ ಕೆ.ಹೊಸ ಕೋಟೆ ಹೋಬಳಿ ಮಠದಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಕಾಫಿ ತೋಟದಿಂದ ಒಂಟಿ ಸಲಗವೊಂದು ದಿಢೀರ್ ರಸ್ತೆಗೆ ಬಂದಿದೆ. ಈ ವೇಳೆ ಬೈಕ್ ಸವಾರ ಆನೆಗೆ ಅಡ್ಡಲಾಗಿ ಬಂದಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಗ್ರಾಮಸ್ಥರು ಬೈಕ್ ಸವಾರನಿಗೆ ಹಿಂತಿರುಗಿ ಹೋಗುವಂತೆ ಕೂಗಾಡಿದ್ದಾರೆ. ಆದರೂ, ಯುವಕ ನುಗ್ಗಿ ಬಂದಿದ್ದು, ಆಶ್ಚರ್ಯ ರೀತಿಯಲ್ಲಿ ಪಾರಾಗಿದ್ದಾನೆ. ಒಂದು ವೇಳೆ ಆನೆ ಸೊಂಡಿಲನ್ನು ಎತ್ತಿದ್ದರೂ ಸಾಕಿತ್ತು, ಬೈಕ್ ಬಿದ್ದು ಆನೆಯ ಪಾದ ಸೇರುತ್ತಿದ್ದ ಎಂದು ಸ್ಥಳದಲ್ಲಿ ಕೆಲವರು ಹೇಳಿದ್ದಾರೆ. ಹಾರೋಹಳ್ಳಿ ಗ್ರಾಮದ ಸಂತೋಷ್ ಆನೆ ದಾಳಿಯಿಂದ ಪಾರಾದ ಯುವಕ. ಈತ ಸ್ವಗ್ರಾಮದಿಂದ ಮಗ್ಗೆ ಗ್ರಾಮಕ್ಕೆ ಹೋಗುತ್ತಿದ್ದ ಎಂದು ತಿಳಿದು ಬಂದಿದೆ. ಸ್ಥಳದಲ್ಲಿ ಇದ್ದವರು ಕಾಡಾನೆಯಿಂದ
ಪಾರಾಗಿ ಬಂದ ಬೈಕ್ ಸವಾರನಿಗೆ ಸರಿಯಾಗಿಯೇ ಬುದ್ಧಿ ಹೇಳಿದ್ದಾರೆ. ಆಲೂರು- ಸಕಲೇಶಪುರದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಜನರು ಜೀವಭಯದಿಂದ ಬದುಕು ನಡೆಸುವಂತಾಗಿದೆ.