ಬೆಟಗೇರಿ: ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ತಪಸಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಈಗಾಗಲೇ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಕೌಜಲಗಿ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಸಮೀಪದ ತಪಸಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಜ್ಜಿಹಾಳ ಗ್ರಾಮದಿಂದ ಗಲಗಲಿ ತೋಟ ಮತ್ತು ತಿರಕನ್ನವರ ತೋಟ ಹಾಗೂ ಬಣಜಿಗೇರ ತೋಟಕ್ಕೆ ಕುಡಿಯುವ ನೀರು ಸರಬರಾಜು ಪೈಪ್ಲೈನ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಡಾ.ರಾಜೇಂದ್ರ, ಜಿಲ್ಲಾ ಪಂಚಾಯತಿ 2020-21 ನೇ ಸಾಲಿನ ಎಚ್ಡಿಪಿ ಯೋಜನೆಯ ಸುಮಾರು 10 ಲಕ್ಷ ರೂ.ಗಳ ಅನುದಾನದಡಿಯಲ್ಲಿ ಹಾಗೂ ಸ್ಥಳೀಯ ಗ್ರಾಮ ಪಂಚಾಯತಿ 15 ನೇ ಹಣಕಾಸಿನ ಯೋಜನೆಯ 3 ಲಕ್ಷ ರೂ.ಗಳ ಅನುದಾನದಡಿಯಲ್ಲಿ ತಪಸಿ ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಪೈಪ್ಲೈನ್ ಜೋಡಣೆ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸ್ಥಳೀಯರ ಬೇಡಿಕೆಯಂತೆ ಕುಡಿಯುವ ನೀರು ಸರಬರಾಜು ಪೈಪ್ಲೈನ್ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಹನಿ ನೀರು ಅಮೂಲ್ಯವಾಗಿದೆ. ಅನವಶ್ಯಕವಾಗಿ ನೀರು ಹಾಳು ಮಾಡದೇ ಸ್ಥಳೀಯರು ಕುಡಿಯುವ ನೀರಿನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಗೋಕಾಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಐ.ಎಮ್.ದಫೇದಾರ, ವಾಸು ಗಲಗಲಿ, ಸಿದ್ದು ಸುಳ್ಳನ್ನವರ, ಗುರುನಾಥ ದಳವಾಯಿ, ಮಾರುತಿ ಬಣಜಿಗೇರ, ಹನುಮಂತ ಪೂಜೇರ, ನ್ಯಾಯವಾದಿ ಗಲಗಲಿ, ಲಕ್ಷ್ಮಣ ದೊಡ್ಡಮನಿ ಸೇರಿದಂತೆ ಗ್ರಾಪಂ ಸದಸ್ಯರು, ಗಣ್ಯರು, ರಾಜಕೀಯ ಮುಖಂಡರು, ಇತರರು ಇದ್ದರು.