ಬೆಂಗಳೂರು; ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನ ವಿರೋಧಿಸಿ ಇಂದು ಕಾಂಗ್ರೆಸ್ ವತಿಯಿಂದ ರಾಜಭವನ ಚಲೋ ರ್ಯಾಲಿ ನಡೆಯಲಿದೆ. ಕಾಂಗ್ರೆಸ್ ರ್ಯಾಲಿ ಹಿನ್ನೆಲೆಯಲ್ಲಿ ನಗರದ ಹೃದಯ ಭಾಗ ಮೆಜೆಸ್ಟಿಕ್ ಸುತ್ತಮುತ್ತ ಸಂಚಾರ ದಟ್ಟಣೆ ಹೆಚ್ಚುವ ಸಾಧ್ಯತೆ ಇದೆ. ಬೆಂಗಳೂರಿನ ಹೃದಯ ಭಾಗ ಸ್ತಬ್ಧವಾಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಜನರು ಇಂದು ರಸ್ತೆಗಿಳಿಯುವ ಮುನ್ನ ಎಚ್ಚರ ವಹಿಸಬೇಕಿದೆ.
ಇಂದು ಬೆಳಗ್ಗೆ 10 ಗಂಟೆಗೆ ಕಾಂಗ್ರೆಸ್ ರ್ಯಾಲಿ ಮೆಜೆಸ್ಟಿಕ್ನ ಕೆಎಸ್ಆರ್ ರೈಲು ನಿಲ್ದಾಣದಿಂದ ಆರಂಭವಾಗಲಿದೆ. ಕೆಎಸ್ಆರ್ ರೈಲು ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತ, ಆನಂದ ರಾವ್ ಫ್ಲೈಓವರ್ ಮೂಲಕ ಫ್ರೀಡಂ ಪಾರ್ಕ್ ಬಳಿಕ ರಾಜಭವನ ಚಲೋ ಕಾರ್ಯಕ್ರಮ ನಡೆಯಲಿದೆ. ಫ್ರೀಡಂ ಪಾರ್ಕ್, ಶೇಷಾದ್ರಿ ರಸ್ತೆ, ಕೆ ಆರ್ ಸರ್ಕಲ್, ವಿಧಾನಸೌಧ, ಪೊಲೀಸ್ ತಿಮ್ಮಯ್ಯ ವೃತ್ತ ಮೂಲಕ ರಾಜಭವನ ಚಲೋ ನಡೆಯಲಿದೆ. ಈ ಮೆರವಣಿಗೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ರೈತರು ಭಾಗಿಯಾಗಲಿದ್ದಾರೆ.
ಅನುಮತಿ ಇಲ್ಲ ಎಂದ ಪೊಲೀಸ್ ಕಮಿಷನರ್
ಕಾಂಗ್ರೆಸ್ ವತಿಯಿಂದ ಆಯೋಜಿಸಿರುವ ರಾಜಭವನ ಚಲೋ ರ್ಯಾಲಿಗೆ ಅನುಮತಿ ಇಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿಕೆ ನೀಡಿದ್ದಾರೆ . ಇಂದಿನ ರಾಜಭವನ ಚಲೋಗೆ ಯಾವುದೇ ಅನುಮತಿ ಕೊಟ್ಟಿಲ್ಲ. ಮೆಜೆಸ್ಟಿಕ್ನಿಂದ ರ್ಯಾಲಿ ಸಂಬಂಧ ಅನುಮತಿ ಕೋರಿ ಪತ್ರ ಬಂದಿದೆ. ಆದರೆ ಇನ್ನೂ ಯಾವುದೇ ಅನುಮತಿ ಕೊಟ್ಟಿಲ್ಲ. ಪರಿಶೀಲನೆ ನಡೆಸಿ ರ್ಯಾಲಿಗೆ ಮಾತ್ರ ಅನುಮತಿ ನೀಡಲಾಗುವುದು. ಕೊರೋನಾ ನಿಯಮಾವಳಿ ಪ್ರಕಾರ 200 ಕ್ಕೂ ಹೆಚ್ಚು ಜನರು ಸೇರುವ ಆಗಿಲ್ಲ. ನಿಯಮ ಉಲ್ಲಂಘನೆಯಾದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ.
ಯಾವೆಲ್ಲಾ ಮುಂಜಾಗ್ರತೆ ಕೈಗೊಳ್ಳಬೇಕು ಅನ್ನೋದರ ಬಗ್ಗೆ ಹಿರಿಯ ಅಧಿಕಾರಿಗಳು ತೀರ್ಮಾನ ತೆಗೆದುಕೊಳ್ಳುತ್ತಾರೆ. ಟ್ರಾಫಿಕ್ ಬಗ್ಗೆಯೂ ನಮ್ಮ ಅಧಿಕಾರಿಗಳು ಕ್ರಮ ಕೈಗೊಳ್ತಾರೆ. ಪರಿಸ್ಥಿತಿ ನೋಡಿಕೊಂಡು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.