Breaking News
Home / Uncategorized / ಇಂದಿನಿಂದ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿ

ಇಂದಿನಿಂದ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿ

Spread the love

ಬೆಂಗಳೂರು,ಜ.18- ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ರಾಜ್ಯದಲ್ಲಿ ಇಂದಿನಿಂದ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದ್ದು, ಗೋವುಗಳ ಹತ್ಯೆ ಹಾಗೂ ಅಕ್ರಮ ಸಾಗಾಣಿಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಪಶುಸಂಗೋಪನಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಬಿ.ಎನ್.ಪ್ರವೀಣ್ ಈ ಆದೇಶ ಹೊರಡಿಸಿದ್ದು, ರಾಜ್ಯಪತ್ರ ಪ್ರಕಟಿಸಲಾಗಿದೆ. ಕೂಡಲೇ ನಿಯಮಗಳನ್ನು ರೂಪಿಸಿ ಜಾರಿಗೊಳಿಸಲಾಗುವುದು. ರಾಜ್ಯದಲ್ಲಿ ರೈತರು, ಕೃಷಿ ಉದ್ದೇಶಕ್ಕಾಗಿ ಜಾನುವಾರು ಸಾಗಣೆ ಮಾಡುವವರು ಯಾವುದೇ ಕಾರಣಕ್ಕೂ ಗೊಂದಲಕ್ಕೀಡಾಗುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆಒಂದು ಕಡೆಯಿಂದ ಮತ್ತೊಂದು ಕಡೆಗೆ ಕೃಷಿ ಉದ್ದೇಶಕ್ಕಾಗಿ ಜಾನುವಾರು ಸಾಗಿಸುವವರು ತಮ್ಮ ಸಂಪೂರ್ಣ ವಿಳಾಸ, ಆಧಾರ್, ಮೊಬೈಲ್ ಸಂಖ್ಯೆ, ಜಾನುವಾರುಗಳ ವಯಸ್ಸು, ಸಾಗಾಣಿಕೆಯ ಉದ್ದೇಶದ ಬಗ್ಗೆ ದೃಢೀಕರಣ ನೀಡಬೇಕು ಎಂದು ಸೂಚಿಸಲಾಗಿದೆ. ಗೋವುಗಳ ಸಂರಕ್ಷಣೆಯಲ್ಲಿ ತೊಡಗಿರುವ ಸ್ವಯಂಸೇವಾ ಸಂಸ್ಥೆಗಳು (ಎನ್‍ಜಿಒ) ಪ್ರಾಣಿ ಕಲ್ಯಾಣ ಮಂಡಳಿಯ ಜೊತೆಗೆ ಕೈಜೋಡಿಸಲು ಹಾಗೂ ಎಲ್ಲ ಹಂತಗಳಲ್ಲಿ ಕಾಯ್ದೆಯ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲು ಹಾಗೂ ಗೋಹತ್ಯೆ, ಅಕ್ರಮ ಜಾನುವಾರು ಸಾಗಾಟದ ಮೇಲೆ ಪೊಲೀಸ್ ಇಲಾಖೆ ಹಾಗೂ ಪಶುಸಂಗೋಪನಾ ಇಲಾಖೆ ಹೆಚ್ಚು ನಿಗಾವಹಿಸಬೇಕು ಎಂದು ಸೂಚಿಸಲಾಗಿದೆ.

ಗೋವುಗಳ ಹತ್ಯೆ ಹಾಗೂ ಅಕ್ರಮ ಸಾಗಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಗೋವುಗಳ ಅಕ್ರಮ ಸಾಗಾಟ ಮತ್ತು ವಧೆ ಆಗುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆ ಅಥವಾ ಆ ಜಿಲ್ಲೆ ಅಥವಾ ತಾಲೂಕಿನ ವ್ಯಾಪ್ತಿಯ ಪಶುಪಾಲನಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲು ಸಾರ್ವಜನಿಕರಿಗೆ ಮನವಿ ಮಾಡುತ್ತೇನೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಮನವಿ ಮಾಡಿದ್ದಾರೆ.

ಕರಡು ನಿಯಮದಲ್ಲಿನ ಅಂಶಗಳು: ಹಸುಗಳನ್ನು ಕೃಷಿ, ಪಶುಸಂಗೋಪನೆ ಉದ್ದೇಶಕ್ಕಾಗಿ ಸಾಗಣೆ ಮಾಡುವವರು ಸಾರಿಗೆ ದೃಢೀಕರಣ ಪತ್ರ, ಮಾಲೀಕತ್ವ ದಾಖಲೆ ಹಾಗೂ ಪಶು ಪ್ರಥಮ ಚಿಕಿತ್ಸಾ ಪರಿಕರಗಳನ್ನು ಹೊಂದಿರಬೇಕು. 15 ಕಿ.ಮೀ. ವ್ಯಾಪ್ತಿಯೊಳಗೆ ಎರಡು ಹಸು ಅಥವಾ ಅವುಗಳ ಕರುಗಳನ್ನು ಸಾಗಣೆ ಮಾಡಲು ಯಾವುದೇ ಸಾರಿಗೆ ದಾಖಲಾತಿಯ ಅಗತ್ಯ ಇಲ್ಲ.

ಜಾನುವಾರು ಸಾಗಿಸುವ ಪ್ರತಿ ಸರಕು ಸಾಗಣೆ ವಾಹನದ ಮೇಲೆ ಕೆಂಪು ಬಣ್ಣದ ದಪ್ಪ ಅಕ್ಷರದಲ್ಲಿ , ಹಸು ರವಾನಿಸುವವರು, ಸ್ವೀಕರಿಸುವವರ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆ ಬರೆದಿರಬೇಕು. ಜೊತೆಗೆ ಸಾಗಣೆ ಮಾಡುತ್ತಿರುವ ಹಸುಗಳ ಸಂಖ್ಯೆ, ತಳಿ ಹಾಗೂ ಪೂರೈಸಲಾದ ಆಹಾರದ ಪ್ರಮಾಣ ಬರೆದಿರಬೇಕು.

ಸಾಗಣೆ ಮಾಡುವ ಹಸುಗಳಿಗೆ ಯಥೇಚ್ಛವಾಗಿ ಹುಲ್ಲು ತಿನ್ನಿಸಿ, ನೀರು ಕುಡಿಸಿರಬೇಕು. ಯಥೇಚ್ಛ ಆಹಾರ, ಹುಲ್ಲು, ನೀರನ್ನು ಸಂಗ್ರಹಿಸಿರಬೇಕು. ಆರು ತಿಂಗಳ ಗರ್ಭಿಣಿ ಹಸುವನ್ನು ಸಾಗಣೆ ಮಾಡುವಂತಿಲ್ಲ. ಆದರೆ, ಚಿಕಿತ್ಸೆ ಉದ್ದೇಶಕ್ಕಾಗಿ ಆ ಹಸುವನ್ನು ಸಾಗಣೆ ಮಾಡಬಹುದಾಗಿದೆ. ಹಸುವನ್ನು ಸಾಗಿಸುವ ವಾಹನಗಳು ಸೂಕ್ತ ವ್ಯವಸ್ಥೆ ಹೊಂದಿರಬೇಕು.

ಹಸು ನಿಲ್ಲಿಸಲು ವಾಹನದಲ್ಲಿ ಖಾಯಂ ವಿಭಜನೆಗಳನ್ನು ಮಾಡಿರಬೇಕು. 100 ಕೆ.ಜಿ ಹಸು ಕೊಂಡೊಯ್ಯಲು 1.5 ಚದರ ಮೀಟರ್ ಜಾಗದ ವಿಭಜನೆ ಮಾಡಿರಬೇಕು. 100 ಕೆ.ಜಿ. ಮೇಲ್ಪಟ್ಟ ಹಸುವನ್ನು ಕೊಂಡೊಯ್ಯಲು ವಾಹನದಲ್ಲಿ 2 ಚದರ ಮೀಟರ್ ಜಾಗದ ವಿಭಜನೆ ಮಾಡಿರಬೇಕು. ಹಸು ಸಾಗಿಸುವ ವಾಹನದ ವೇಗ ಪ್ರತಿ ಗಂಟೆಗೆ 25 ಕಿ.ಮೀ. ಮೀರಬಾರದು.

ಹಸುಗಳನ್ನು ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆ ಅವಧಿಯಲ್ಲಿ ಸಾಗಾಟ ಮಾಡುವಂತಿಲ್ಲ. ಬೇಸಿಗೆ ಸಮಯವಾದ ಮಾರ್ಚ್‍ನಿಂದ ಮೇ ಅವಧಿಯಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಹಸು ಸಾಗಾಟ ಮಾಡಬಾರದು ಎಂದು ತಿಳಿಸಲಾಗಿದೆ. ಇತ್ತೀಚೆಗಷ್ಟೇ ರಾಜ್ಯಪಾಲರು ಗೋಹತ್ಯೆ ನಿಷೇಧ ಕಾಯ್ದೆಯ ಸುಗ್ರೀವಾಜ್ಞಾಗೆ ಅಂಕಿತ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಇಂದಿನಿಂದ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿದೆ


Spread the love

About Laxminews 24x7

Check Also

ಚುನಾವಣೆ ಚೆಕಿಂಗ್; ದಾಖಲೆ ಇಲ್ಲದ 20 ಲಕ್ಷಕ್ಕೂ ಅಧಿಕ ವಶ.!

Spread the love ಚಿತ್ರದುರ್ಗ; ಚಿತ್ರದುರ್ಗದಲ್ಲಿ ವಾಹನ ಒಂದರಲ್ಲಿ ವ್ಯಕ್ತಿಯೊಬ್ಬರು ದಾಖಲೆ ಇಲ್ಲದೆ ಸುಮಾರು 20 ಲಕ್ಷಕ್ಕೂ ಅಧಿಕ ಹಣವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ