ಕಲಬುರ್ಗಿ (ಜನವರಿ 18); ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಗಡಿ ವಿಚಾರದಲ್ಲಿ ನೀಡಿರೋ ಹೇಳಿಕೆ ಕನ್ನಡಿಗರನ್ನು ಕೆರಳಿಸಿದೆ. ಕಾಂಗ್ರೆಸ್ ನಾಯಕರೂ ಠಾಕ್ರೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಠಾಕ್ರೆ ನೂರು ಬಾರಿ ಹೇಳಿಕೆ ನೀಡಿದ್ರೂ ಬೆಳಗಾವಿ ಮಾತ್ರ ನಮ್ಮದೇ ಆಗಿರುತ್ತದೆಯೇ ಹೊರತು, ಮಹಾರಷ್ಟ್ರಕ್ಕೆ ಸೇರಲ್ಲ. ಠಾಕ್ರೆ ಹೇಳಿಕೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳೋ ಅವಶ್ಯಕತೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕಿಡಿಕಾರಿದ್ದಾರೆ. ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, “ಗಡಿ ವಿಚಾರದಲ್ಲಿ ಪದೇ ಪದೇ ಕ್ಯಾತೆ ತೆಗೆಯೋದು ಸರಿಯಲ್ಲ. ನೆಲ, ಜಲ ವಿಷಯದಲ್ಲಿ ಈಗಾಗಲೆ ಇತ್ಯರ್ಥವಾಗಿದೆ. ಮಹಾಜನ್ ವರದಿಯೇ ಅಂತಿಮ. ಮುಖ್ಯಮಂತ್ರಿ ಸ್ಥಾನದಲ್ಲಿರೋ ವ್ಯಕ್ತಿ ಈ ರೀತಿ ಹೇಳಿಕೆ ನೀಡಬಾರದು.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷ ಶಿವಸೇನೆ ಬೆಂಬಲಿಸಿದೆ. ಆದರೆ ಸಿಎಂ ಹೇಳಿಕೆ ಅವರ ವೈಯಕ್ತಿಕವಾಗಿದ್ದು, ಅದಕ್ಕೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡೋ ಅವಶ್ಯಕತೆಯಿಲ್ಲ. ಗಡಿ ವಿಚಾರ ಮುಗಿದ ಅಧ್ಯಾಯ. ಗಡಿ ಭಾಗ ನಮ್ಮದು ಎನ್ನಲು ಈಗಾಗಲೇ ಬೆಳಗಾವಿಯಲ್ಲಿ ಸುವರ್ಣ ಸೌಧ ಕಟ್ಟಿದ್ದೇವೆ. ಠಾಕ್ರೆ ಹೇಳಿಕೆಗೆ ಅಷ್ಟೋಂದು ಮಹತ್ವ ಕೊಡೋ ಅವಶ್ಯಕತೆಯಿಲ್ಲ” ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.