ನವದೆಹಲಿ, ಜ.17- ಚಲಿಸುತ್ತಿದ್ದ ಬಸ್ ವಿದ್ಯುತ್ ತಂತಿಗೆ ತಗುಲಿ ಬೆಂಕಿ ಹೊತ್ತಿಕೊಂಡಿದ್ದು , 6 ಮಂದಿ ಸಜೀವ ದಹನವಾಗಿರುವ ಘಟನೆ ರಾಜಸ್ತಾನದ ಜೊಲೊರೇ ಜಿಲ್ಲೆಯಲ್ಲಿ ನಡೆದಿದೆ.
ಮಹೇಶ್ಪುರ ಗ್ರಾಮದ ಬಳಿ ಶನಿವಾರ ರಾತ್ರಿ ದುರ್ಘಟನೆ ನಡೆದಿದ್ದು, 30 ಮಂದಿ ಗಾಯಗೊಂಡಿದ್ದಾರೆ. ಚಾಲಕ ದಾರಿ ತಪ್ಪಿದ್ದು, ಹಳ್ಳಿಯ ರಸ್ತೆಯಲ್ಲಿ ಬಸ್ ಚಾಲನೆ ಮಾಡಿದ್ದಾನೆ. ಹೊಸ ದಾರಿಯಲ್ಲಿ ವಿದ್ಯುತ್ ತಂತಿ ಇರುವ ಬಗ್ಗೆ ಮಾಹಿತಿ ಇಲ್ಲದೆ ಅವಘಡ ಸಂಭವಿಸಿದೆ.
ನೇತಾಡುತ್ತಿದ್ದ ವಿದ್ಯುತ್ ತಂತಿ ಚಲಿಸುತ್ತಿದ್ದ ಬಸ್ಗೆ ತಗುಲಿದ್ದು, ಬೆಂಕಿ ಹೊತ್ತಿಕೊಂಡಿದೆ. ಈ ಬಸ್ನಲ್ಲಿ ಸುಮಾರು 40 ಮಂದಿ ಪ್ರಯಾಣಿಕರಿದ್ದು, ಅವರಲ್ಲಿ 6 ಮಂದಿ ಸಜೀವ ದಹನವಾಗಿದ್ದಾರೆ. ಸುಮಾರು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಖಾಸಗಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಇವರು ನಾಕೋಡದ ಜೈನ್ ದೇವಸ್ಥಾನಕ್ಕೆ ಭೇಟಿ ನೀಡಿ ಅಜ್ಮೀರ್ನ ದೀವಾರ್ ಕಡೆಗೆ ಪ್ರಯಾಣ ಮಾಡುತ್ತಿದ್ದರು ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಹಿಮಂತ್ಸಿಂಗ್ ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ 6 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಜೋಧ್ಪುರ ಆಸ್ಪತ್ರೆಗೆ ಸಾಗಿಸಲಾಗಿದ್ದು, ಜೊಲೋರೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟವರನ್ನು ಸುರ್ಮಿ ದೇವಿ , ಸೊನಾಲ್ ಜೈನ್, ಚಾರ್ದೇವಿ, ರಾಜೇಂದ್ರ ಜೈನ್, ಧರ್ಮಚಂದ್ ಎಂದು ಗುರುತಿಸಲಾಗಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ದುರ್ಘಟನೆಯಲ್ಲಿ ಸಂತ್ರಸ್ತರಾದವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.