ಬೆಳಗಾವಿ(ಜ. 15): ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಬಿಜೆಪಿಯಲ್ಲಿ ಅನೇಕ ಶಾಸಕರು ಅಸಮಾಧಾನ, ಆಕ್ರೋಶ ಹಾಗೂ ಸಿಟ್ಟನ್ನು ಹೊರ ಹಾಕುತ್ತಿದ್ದಾರೆ. ಆದರೇ ಜಾರಕಿಹೊಳಿ ಸಹೋದರರು ಮಾತ್ರ ಕುಟುಂಬಕ್ಕೆ ಜನಸಂಘದ ನಂಟಿನ ವಿಚಾರವಾಗಿ ವಾಗ್ವಾದ ನಡೆಸುತ್ತಿದ್ದಾರೆ. ಸಚಿವ ರಮೇಶ ಜಾರಹೊಳಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನಡುವೆ ಪರಸ್ಪರ ಆರೋಪ, ಪ್ರತ್ಯಾರೋಪ ನಡೆಯುತ್ತಿವೆ. ನಾವಗೆ ಗ್ರಾಮದಲ್ಲಿ ಇತ್ತೀಚಿಗೆ ನಡೆದ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ ಜಾರಕಿಹೊಳಿ, ನಾನು ಓರಿಜನಲ್ ಜನ ಸಂಘದ ವ್ಯಕ್ತಿ. ನಮ್ಮ ತಂದೆ ಸಂಘಕ್ಕಾಗಿ ಕೆಲಸ ಮಾಡಿದ್ದರು. ಗೋವಾ ವಿಮೋಚನೆ ಚಳುವಳಿಯಲ್ಲಿ ಪಾಲ್ಗೊಂಡು ಮೂರು ತಿಂಗಳು ಜೈಲು ಸೇರಿದ್ದರು. ದಿ. ಜಗನ್ನಾಥ ಜೋಶಿ ಜತೆಗೆ ಲಕ್ಷ್ಮಣರಾವ್ ಜಾರಕಿಹೊಳಿ ಸಂಪರ್ಕ ಹೊಂದಿದ್ದರು. ನಂತರ ಅನಿವಾರ್ಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ಜಾರಕಿಹೊಳಿ ಗುರುತಿಸಿಕೊಂಡಿದ್ದೇವೆ ಎಂದು ಹೇಳಿಕೆ ನೀಡಿದ್ದರು.
ಸಚಿವ ರಮೇಶ ಜಾರಕಿಹೊಳಿ ಹೇಳಿಕೆಗೆ ಟಾಂಗ್ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ರಮೇಶ ಜಾರಕಿಹೊಳಿ ಯಾವಾಗ ಸಂಘ ಪರಿವಾರದಲ್ಲಿ ಇದ್ದರು ಎನ್ನುವುದನ್ನು ನಾವಂತು ನೋಡಿಲ್ಲ. ಗೋಕಾಕ್ ನಲ್ಲಿ ಪತ್ರಾವಳಿ ಅಂತ ಒಂದು ಕುಟುಂಬವಿದ್ದು, ಅವರ ಕಟ್ಟಾ ಆರ್ ಎಸ್ ಎಸ್ ಬೆಂಬಲಿಗರು. ಅವರ ಅಂಗಡಿಯಲ್ಲಿ ತಂದೆ ಹೋಗಿ ಕುರುತಿದ್ದರು. ಸ್ನೇಹವಿತ್ತು ಅಷ್ಟೇ . ತಂದೆ ಸಂಘದ ಕಚೇರಿಗೆ ಎಂದು ಹೋಗಿಲ್ಲ, ಗೋವಾ ವಿಮೋಚನಾ ಹೋರಾಟ ಹಾಗೂ ಆರ್ ಎಸ್ ಎಸ್ ನಂಟಿಗೂ ಸಂಬಂಧವಿಲ್ಲ ಎಂದರು.
ರಮೇಶ ಜಾರಕಿಹೊಳಿ ಎಂದು ಕರಿ ಟೋಪಿ ಹಾಕಿರುವುದನ್ನು ನಾನು ನೋಡಿಲ್ಲ. ಆದರೆ ಮುಸ್ಲಿಂ ಟೋಪಿ ಹಾಕಿರುವುದನ್ನು ನೋಡಿದ್ದೇವೆ, ಇದಕ್ಕೆ ಸಾಕ್ಷಿಗಳು ಇವೆ. ಆರ್ ಎಸ್ ಎಸ್ ಗೂ ಜಾರಕಿಹೊಳಿ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ. 30 ವರ್ಷದಲ್ಲಿ ಇದೇ ಮೊದಲು ರಮೇಶ ಜಾರಕಿಹೊಳಿ ಹೀಗೆ ಹೇಳಿದ್ದು ಆಶ್ಚರ್ಯ ತಂದಿದೆ. ಬಿಜೆಪಿಗೆ ಹೋದ ಮೇಲೆ ಸಿದ್ಧಾಂತ ಬಿಡಬಾರದು ಎಂಬುದು ನಮ್ಮ ಬಯಕೆ. ಆರ್ ಎಸ್ ಎಸ್ ತರಬೇತಿಯಲ್ಲಿ ಕುಳಿತು ರಮೇಶ ಜಾರಕಿಹೊಳಿ ಮೈಂಡ್ ವಾಶ್ ಆಗಿರಬೇಕು. ಅಧಿಕಾರ ಏಂಜಾಯ್ ಮಾಡಲಿ ಆದರೇ ಹೋರಾಟ ಮರೆಯಬಾರದು ಎಂಬುದು ನಮ್ಮ ಬಯಕೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆಗೆ ಸಚಿವ ರಮೇಶ ಜಾರಕಿಹೊಳಿ ಪ್ರತ್ಯುತ್ತರ ನೀಡಿದ್ದು, ಸತೀಶ ಜಾರಕಿಹೊಳಿ ಮಾತು ಕೇಳಿ ನಗು ಬರುತ್ತಿದೆ, ಜವಾಬ್ದಾರಿಯುತ ಸ್ಥಾನದಲ್ಲಿ ಹೀಗೆ ಮಾತನಾಡುವುದು ನೋಡಿದರೆ ವಿಚಿತ್ರ ಎನಿಸುತ್ತದೆ. ನಾನು ಜಸಂಘದಿಂದ ಬಂದಿದ್ದು ನಿಜ, ಬಳಿಕ ಕಾಂಗ್ರೆಸ್ ಹೋಗಿದ್ದು ನಿಜ, ಅಜ್ಮೀರ್ ಹೋಗಿ ಮುಸ್ಲಿಂ ಟೋಪಿ ಹಾಕಿದ್ದು ನಿಜ ಯಾವುದನ್ನು ನಾನು ನಿರಾಕರಣೆ ಮಾಡುತ್ತಿಲ್ಲ. ನಾನು ಈಗಲೂ ಮುಸ್ಲಿಂ, ಹಿಂದೂಳಿದವರ ಪರ ಇದ್ದೇನೆ. ಸತೀಶ ಜಾರಕಿಹೊಳಿ ನಾಯಕತ್ವ ನೆಲಕಚ್ಚಿದೆ. 7 ವರ್ಷ ವಿಶ್ರಾಂತಿ ತೆಗೆದುಕೊಳ್ಳುವುದು ಒಳ್ಳೆಯದು. ಸತೀಶ ಸಿಎಂ ಆಗುವುದು ದೂರದ ವಿಚಾರ ಮೊದಲು ಯಮಕನಮರಡಿ ಕ್ಷೇತ್ರದಲ್ಲಿ ಗೆದ್ದು ಬರಲಿ ಎಂದು ಟಾಂಗ್ ಕೊಟ್ಟರು.