ಯಾದಗಿರಿ:ಬಸ್ ಸಂಚಾರ ಮಾಡುವ ವಿಚಾರದಲ್ಲಿ ಎರಡು ರಾಜ್ಯದ ಸಾರಿಗೆ ಇಲಾಖೆ ನೌಕರರ ನಡುವೆ ವಾಕ್ಸಮರ ನಡೆದಿದೆ. ಅವಧಿ ಮುನ್ನವೇ ಬಸ್ ನಿಲ್ದಾಣದಲ್ಲಿ ತೆಲಂಗಾಣ ಬಸ್ ತೆಗೆದುಕೊಂಡು ಬಂದ ವಿಚಾರವಾಗಿ ತೆಲಂಗಾಣ ಹಾಗೂ ರಾಜ್ಯದ ಸಾರಿಗೆ ನೌಕರರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಕಂಟ್ರೋಲರ್ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ನ ಕೇಂದ್ರ ಬಸ್ ನಿಲ್ದಾಣದಲ್ಲಿ ನಸುಕಿನ ಜಾವ ಘಟನೆ ಜರುಗಿದೆ. ಎರಡು ದಿನದ ಹಿಂದೆ ಘಟನೆ ಜರುಗಿದ್ದು ಈಗ ಗಲಾಟೆ ವಿಡಿಯೋ ವೈರಲ್ ಆಗಿದೆ.
ಈಶಾನ್ಯ ಸಾರಿಗೆ ಸಂಸ್ಥೆಯ ಗುರುಮಠಕಲ್ ವಿಭಾಗದ ಬಸ್ ಪರಗಿ ಮಾರ್ಗವಾಗಿ ಹೈದ್ರಾಬಾದ್ ಗೆ ತೆರಳಬೇಕಿತ್ತು. ಆದರೆ, ಗುರುಮಠಕಲ್ ವಿಭಾಗದ ಬಸ್ ತೆರಳುವ ಮುನ್ನವೇ ತೆಲಂಗಾಣದ ಪರಗಿ ಡಿಪೋದ ಬಸ್ ಗುರುಮಠಕಲ್ ಬಸ್ ನಿಲ್ದಾಣಕ್ಕೆ ತರಲಾಗಿತ್ತು. ಪರಗಿ ಡಿಪೋದ ಬಸ್ ಚಾಲಕ ಹಾಗೂ ನಿರ್ವಾಹಕ ಗುರುಮಠಕಲ್ ಬಸ್ ನಲ್ಲಿ ಕುಳಿತ ಪ್ರಯಾಣಿಕರನ್ನು ಪರಗಿ ಬಸ್ ನೊಳಗೆ ಕೂರಿಸಿಕೊಂಡು ಬಸ್ ಸಂಚಾರ ಆರಂಭ ಮಾಡಿದನು. ಇದಕ್ಕೆ ಅಕ್ರೋಶಗೊಂಡ ಗುರುಮಠಕಲ್ ಬಸ್ ಕಂಟ್ರೋಲರ್ ಮಧುಸೂದನ್ ಪ್ರಶ್ನೆ ಮಾಡಿ ಬಸ್ ತಡೆದಿದ್ದರು.