ಖ್ಯಾತ ಕಮಿಡಿಯನ್, ನಟ ಕಪಿಲ್ ಶರ್ಮಾ ಗೆ ಮುಂಬೈನ ಕ್ರೈಂ ಬ್ರ್ಯಾಂಚ್ ಪೊಲೀಸರು ಸಮನ್ಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಕಮಿಡಿಯನ್ ಕಪಿಲ್ ಶರ್ಮಾ, ಕಾರ್ ಡಿಸೈನರ್ ಒಬ್ಬರ ಮೇಲೆ ವಂಚನೆ ಪ್ರಕರಣ ದಾಖಲಿಸಿದ್ದರು. ಇದೇ ಪ್ರಕರಣ ಸಂಬಂಧ ಕಪಿಲ್ ಶರ್ಮಾ ಅವರನ್ನು ವಿಚಾರಣೆಗೆ ಕರೆದಿದ್ದಾರೆ ಪೊಲೀಸರು.
ಕಾರು ಡಿಸೈನ್ ಸಂಸ್ಥೆ ಡಿಸಿ ಡಿಸೈನ್ ಸ್ಟುಡಿಯೋ ಮಾಲೀಕ ದಿಲಿಪ್ ಛಬ್ರಿಯಾ ವಿರುದ್ಧ ಪ್ರಕರಣ ದಾಖಲಿಸಿದ್ದರು ಕಪಿಲ್ ಶರ್ಮಾ. ದಿಲಿಪ್ ಅನ್ನು ಬಂಧಿಸಿದ್ದ ಪೊಲೀಸರು ಹಲವು ಕಾರುಗಳನ್ನು ವಶಪಡಿಸಿಕೊಂಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಕಪಿಲ್ ಶರ್ಮಾ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ಕೆಲವು ತಿಂಗಳ ಹಿಂದೆ ಕಪಿಲ್ ಶರ್ಮಾ, ದಿಲಿಪ್ ಗೆ ವ್ಯಾನಿಟಿ ವ್ಯಾನ್ ಒಂದನ್ನು ನಿರ್ಮಿಸಿಕೊಡುವಂತೆ ಹಣ ಪಾವತಿಸಿದ್ದರು. ಆದರೆ ದಿಲಿಪ್ ವ್ಯಾನಿಟಿ ವಾಹನ ಮಾಡಿಕೊಟ್ಟಿರಲಿಲ್ಲ. ಈ ಪ್ರಕರಣ ಸಂಬಂಧ ಕಪಿಲ್ ಮತ್ತು ದಿಲೀಪ್ ನಡುವೆ ವಾಗ್ವಾದ ಆಗಿದ್ದು, ನಂತರ ಕಪಿಲ್ ಶರ್ಮಾ, ದಿಲೀಪ್ ವಿರುದ್ಧ ದೂರು ದಾಖಲಿಸಿದ್ದರು.
ದಿಲೀಪ್ ಅನ್ನು ಬಂಧಿಸಿದ ಮುಂಬೈ ಪೊಲೀಸರು ಆತನಿಂದ ಕೆಲವು ಕಾರುಗಳನ್ನು ವಶಪಡಿಸಿಕೊಂಡಿದ್ದು, ಆತ ಕಾರುಗಳ ನೊಂದಾವಣಿಯಲ್ಲಿ ಸಹ ವಂಚನೆ ಎಸಗಿದ್ದಾನೆ ಎಂಬ ಅಂಶ ಹೊರಗೆಡವಿದ್ದಾರೆ.