ಹಾಸನ: ಜಿಲ್ಲೆಯಲ್ಲಿ ಶಾಲೆಗಳು ಆರಂಭಗೊಂಡ ಬಳಿಕ ಹತ್ತು ಶಿಕ್ಷಕರಿಗೆ ಕೋವಿಡ್ 19 ದೃಢಪಟ್ಟಿರುವುದರಿಂದ ಏಳು ಶಾಲೆಗಳಿಗೆ ಶಿಕ್ಷಣ ಇಲಾಖೆ ರಜೆ ಘೋಷಿಸಿದೆ.
ಪ್ರಾಥಮಿಕ ಶಾಲೆಯ ಏಳು ಮತ್ತು ಪ್ರೌಢಶಾಲೆಯ ಮೂವರು ಶಿಕ್ಷಕರಿಗೆ ಸೋಂಕು ತಗುಲಿದ್ದು, ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಆತಂಕ ಉಂಟಾಗಿದೆ. ಶಾಲೆ ಆರಂಭಕ್ಕೂ ಮುನ್ನ ಮೂವರು ಶಿಕ್ಷಕರಿಗೆ ಪಾಸಿಟಿವ್ ಪತ್ತೆಯಾಗಿತ್ತು. ಹಾಗಾಗಿ ಸೋಂಕಿತ ಶಿಕ್ಷಕರು ಶಾಲೆಗೆ ಹಾಜರಾಗಿರಲಿಲ್ಲ.
‘ಚನ್ನರಾಯಪಟ್ಟಣ ತಾಲ್ಲೂಕಿನ ಮೂವರು, ಹಾಸನ ತಾಲ್ಲೂಕಿನ ಇಬ್ಬರು ಹಾಗೂ ಹೊಳೆನರಸೀಪುರ ತಾಲ್ಲೂಕಿನ ಇಬ್ಬರು ಶಿಕ್ಷಕರಿಗೆ ಸೋಂಕು ತಗುಲಿದೆ. ಏಳು ಶಾಲೆಗಳಿಗೆ ಶುಕ್ರವಾರದವರೆಗೂ ರಜೆ ನೀಡಲಾಗಿದೆ. ಬಳಿಕ ಪರಿಸ್ಥಿತಿ ನೋಡಿಕೊಂಡು ಶಾಲೆ ತೆರೆಯಲು ನಿರ್ಧರಿಸಲಾಗಿದೆ. ಶಾಲೆಗಳಲ್ಲಿ ಸ್ಯಾನಿಟೈಸ್ ಮಾಡಲು ಸೂಚಿಸಲಾಗಿದೆ. ಎಲ್ಲ ಶಿಕ್ಷಕರಿಗೂ ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಎಸ್.ಪ್ರಕಾಶ್ ತಿಳಿಸಿದರು.