ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ಬಿಜೆಪಿ ಶಾಸಕರ ಜೊತೆ ಸಭೆ ಆಯೋಜಿಸಿದ್ದರು. ಸಭೆಯಲ್ಲಿ ಮುಂಬೈ ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಮಧ್ಯ ಕರ್ನಾಟಕ ಭಾಗದ ಶಾಸಕರ ಜೊತೆ ಸಿಎಂ ಬಿ.ಎಸ್. ಯಡಿಯೂರಪ್ಪ ಚರ್ಚೆ ನಡೆಸಿದರು. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳ 35 ಶಾಸಕರ ಜೊತೆ ನಗರದ ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಸಿದರು. ತಮ್ಮ ಕ್ಷೇತ್ರಗಳಲ್ಲಿ ಶಾಸಕರು ಎದುರಿಸುತ್ತಿರುವ ಸಮಸ್ಯೆ ಹಾಗೂ ಅನುದಾನದ ಬಗ್ಗೆ ಚರ್ಚೆ ಸಹ ನಡೆಸಿದರು.
ಈ ವೇಳೆ, ತಮ್ಮ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ವಲಯವಾರು ಸಭೆಗೆ ಆಗಮಿಸಿದ್ದರು. ಸಭೆಯಲ್ಲಿ ಎಲ್ಲರಿಗಿಂತ ಮೊದಲೇ ಹಾಜರಾಗಿದ್ದ ಯತ್ನಾಳ್ ಮೊದಲ ಸಾಲಿನಲ್ಲಿ ಕುಳಿತರು
ತದ ನಂತರ ಸಭೆಗೆ ಆಗಮಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಇದನ್ನು ಗಮನಿಸಿ ಏನಪ್ಪಾ, ಮೊದಲೇ ಬಂದು ಚೇರ್ ರಿಸರ್ವ್ ಮಾಡ್ಕೊಂಡಿದ್ದೀಯಾ ಎಂದು ಯತ್ನಾಳ್ಗೆ ಕಿಚಾಯಿಸಿದರು. ಇದಕ್ಕೆ ಶಾಸಕ ಯತ್ನಾಳ್.. ಹೌದು ಅಂತಾ ನಗುತ್ತಲೇ ಉತ್ತರಿಸಿದರು. ಇಬ್ಬರ ಸಂಭಾಷಣೆ ಗಮನಿಸಿದ ಇತರ ಶಾಸಕರು ಈ ವೇಳೆ ಯತ್ನಾಳ್ರನ್ನು ಸುತ್ತುವರಿದು ಮಾತನಾಡಿಸಿದರು