ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಡುವೆ ಸಂಘರ್ಷ ಶುರುವಾದಂತಿದೆ. ಇಂದು ವಿಶೇಷ ಅಧಿವೇಶನಕ್ಕಾಗಿ ಮಂಡಿಸಬೇಕಾದ ಭಾಷಣದಲ್ಲಿ ಕೆಲ ಆಕ್ಷೇಪಾರ್ಹ ಅಂಶಗಳ ಕೈಬಿಡಬೇಕೆಂಬ ರಾಜ್ಯಪಾಲರ ಸೂಚನೆಯನ್ನು ಸರ್ಕಾರ ತಿರಸ್ಕರಿಸಿದೆ. ಈ ಮಧ್ಯೆ ಅಧಿವೇಶನಕ್ಕೆ ರಾಜ್ಯಪಾಲರು ಬಾರದಿದ್ದರೆ ಕಾನೂನು ಹೋರಾಟಕ್ಕೆ ಸರ್ಕಾರ ಸಜ್ಜುಗೊಂಡಿದೆ.
ರಾಜ್ಯ ಸರ್ಕಾರ ಸಿದ್ದಪಡಿಸಿದ ಭಾಷಣದಲ್ಲಿ ಕೇಂದ್ರದ ವಿರುದ್ಧ ಧೋರಣೆಗಳಿರುವ 11 ಪ್ಯಾರಾಗಳನ್ನು ಕೈ ಬಿಡಬೇಕೆಂದು ಸರ್ಕಾರಕ್ಕೆ ಸೂಚಿಸಿದ್ದರು. ಈ ಸಂಬಂಧ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ನೇತೃತ್ವದ ನಿಯೋಗ ಅವರನ್ನು ಭೇಟಿ ಮಾಡಿ, ಮನವರಿಕೆ ಮಾಡಲು ಯತ್ನಿಸಿದರೂ ಫಲಕಾರಿಯಾಗಿರಲಿಲ್ಲ. ಈ ಬಗ್ಗೆ ಸಿಎಂ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಸಚಿವರು ತಿಳಿಸಿದ್ದರು.
ಸಿಎಂ ನಿವಾಸದಲ್ಲಿ ನಡೆದ ಚರ್ಚೆಯ ವೇಳೆ ರಾಜ್ಯಪಾಲರು ಸೂಚಿಸಿದ 11 ಪ್ಯಾರಾಗಳಲ್ಲಿರುವ ಕೆಲ ವಿಷಯಗಳನ್ನು ಬದಲಾಯಿಸಲು ಸಹಮತಿ ವ್ಯಕ್ತಪಡಿಸಿದರೂ, ವಿಬಿ ರಾಮ್ ಜಿ ಯೋಜನೆಯ ವಿರೋಧ ನಿರ್ಧಾರವನ್ನು ಹಿಂಪಡೆಯುವುದಿಲ್ಲ. ಕೆಲವೊಂದು ಸಾಲುಗಳನ್ನು ಬದಲಾಯಿಸುವ ನಿರ್ಧಾರವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಸಭೆಯ ಬಳಿಕ ಹೆಚ್.ಕೆ.ಪಾಟೀಲ್ ಹೇಳಿದರು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರು ರಾಜ್ಯಪಾಲರು ಭೇಟಿ ಮಾಡಿ ಕೈಗೊಂಡಿರುವ ನಿರ್ಧಾರದ ಬಗ್ಗೆ ತಿಳಿಸಿದರು. ಬಳಿಕ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮನರೇಗಾ ವಿಚಾರ ಯಾವುದೇ ಕಾರಣಕ್ಕೂ ಕೈ ಬಿಡಲ್ಲ. ರಾಜ್ಯದ ಹಿತ ಕಾಪಾಡುವ ಅಂಶವನ್ನು ನಾವು ಬಿಡುವ ಪ್ರಶ್ನೆಯೇ ಇಲ್ಲ. ಸಿಎಂ ಜೊತೆ ಮಾತುಕತೆ ಮಾಡಿದ್ದೇವೆ, ಆ ಭಾಷಣವನ್ನೇ ರಾಜ್ಯಪಾಲರು ಓದಬೇಕು ಎನ್ನುವುದು ಕ್ಯಾಬಿನೆಟ್ ನಿರ್ಧಾರವಾಗಿದೆ. ಜಂಟಿ ಅಧಿವೇಶನಕ್ಕೆ ರಾಜ್ಯಪಾಲರು ಬರುವ ವಿಶ್ವಾಸವಿದೆ. ಬೆಳಗ್ಗೆ ಅವರನ್ನು ಕರೆದೊಯ್ಯಲು ಲೋಕಭವನಕ್ಕೆ ಬರುತ್ತೇನೆ ಎಂದು ತಿಳಿಸಿದರು.
ರಾಜ್ಯಪಾಲರ ನಿರ್ಧಾರದ ಬಗ್ಗೆ ಕಾನೂನು ಹೋರಾಟಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಗುರುವಾರ ಬೆಳಗ್ಗೆ 11.15ರ ವರೆಗೆ ರಾಜ್ಯಪಾಲರು ಅಧಿವೇಶನಕ್ಕೆ ಬಾರದಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದೆ. ಈ ಸಂಬಂಧ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಈಗಾಗಲೇ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಪೊನ್ನಣ್ಣ ಅವರಿಗೆ ಕಾನೂನು ಹೋರಾಟದ ಡ್ರಾಫ್ಟ್ ಮಾಡಲು ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Laxmi News 24×7