ಬೆಳಗಾವಿ: ಉತ್ತರ ಕರ್ನಾಟಕದ ಶಾಸಕರು ಬೆಂಗಳೂರಿಗೆ ಬಂದು ಭಿಕ್ಷುಕರ ತರ ಭಿಕ್ಷೆ ಬೇಡಬೇಕು. ಕೊನೆಗೆ ಹತ್ತು, ಇಪ್ಪತ್ತು ಪೈಸೆ ಸಿಗುತ್ತದೆ ಎಂದು ಆಡಳಿತ ಪಕ್ಷದ ಶಾಸಕ ರಾಜು ಕಾಗೆ ಅಸಹಾಯಕತೆ ಹೊರಹಾಕಿದರು.
ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಬಗ್ಗೆ ನಡೆದ ಚರ್ಚೆ ವೇಳೆ ಮಾತನಾಡಿದ ಅವರು, ಉತ್ತರ ಕರ್ನಾಟಕದವರು ಇಲ್ಲಿಗೆ ಬಂದು ಕೈಮುಗಿದು ಎಲ್ಲರ ಮುಂದೆ ನಿಲ್ಲಬೇಕು. ನಾನು ಈ ಬಗ್ಗೆ ಧ್ವನಿ ಎತ್ತಿದ್ದೆ. ಆದರೆ ನಾನು ನನ್ನ ಪಕ್ಷದ ವಿರುದ್ಧ ಮಾತನಾಡಿದ್ದೆ ಎಂದು ಮಾಧ್ಯಮಗಳಲ್ಲಿ ಪ್ರಸಾರ ಆಗಿತ್ತು. ನಾನು ಸರ್ಕಾರದ ವಿರುದ್ಧ ಮಾತನಾಡಿಲ್ಲ. ಅಧಿಕಾರಿಗಳು ಪಾರದರ್ಶಕತೆಯಿಂದ ಕೆಲಸ ಮಾಡಬೇಕು ಎಂದಿದ್ದೆ ಎಂದು ವಿವರಿಸಿದರು.
ಉತ್ತರ ಕರ್ನಾಟಕ ಭಾಗಕ್ಕೆ ಐದು ಸಾವಿರ ಕೋಟಿ ರೂ. ಕೊಡಿ: ನಾನು ಪ್ರಧಾನಿ, ಸಿಎಂಗೆ ಪ್ರತ್ಯೇಕ ರಾಜ್ಯ ಮಾಡುವಂತೆ ಕೋರಿ ಪತ್ರ ಬರೆದಿದ್ದೆ. ಇದು ನನ್ನ ಅನಿಸಿಕೆ ಆಗಿತ್ತು. ಇದಕ್ಕೆ ಕೆಲವರು ಟೀಕೆ ಮಾಡಿದರು. ಇನ್ನೂ ಕೆಲ ಸಂಘ ಸಂಸ್ಥೆಗಳು ಅದನ್ನು ಬೆಂಬಲಿಸಿದವು. ಕಲ್ಯಾಣ ಕರ್ನಾಟಕದ 371ಜೆಯಿಂದ ನಮಗೆ ಏನೂ ಉಪಯೋಗ ಇಲ್ಲ. ಉತ್ತರ ಕರ್ನಾಟಕ ಭಾಗಕ್ಕೂ ಐದು ಸಾವಿರ ಕೋಟಿ ಕೊಡಿ ಎಂಬುದು ನನ್ನ ಮನವಿ. ಏಕೆಂದರೆ ನಮ್ಮ ಭಾಗವೂ ಹಿಂದುಳಿದಿದೆ. ನಮ್ಮಲ್ಲಿ ಅನೇಕರು ಇನ್ನೂ ಬೆಂಗಳೂರು ನೋಡಿಲ್ಲ. ಏಕೆಂದರೆ, ಸುಮಾರು 800 ಕಿ. ಮೀ. ದೂರ ಇದೆ ಎಂದರು.
ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಸಾಯೋ ತನಕ ನಾನು ಹೋರಾಟ ಮಾಡುತ್ತೇನೆ: ಕಲ್ಯಾಣ ಕರ್ನಾಟಕ ಜೊತೆ ಜೊತೆಗೆ ಉತ್ತರ ಕರ್ನಾಟಕ ಭಾಗಕ್ಕೂ ಸುಮಾರು 5,000 ದಿಂದ 10,000 ಕೋಟಿ ರೂ. ನೀಡಬೇಕು ಎಂಬುದು ನನ್ನ ಮನವಿ. ನಾನು ಸರ್ಕಾರದ ವಿರುದ್ಧ ಇಲ್ಲ. ಒಬ್ಬರ ಕಣ್ಣಿಗೆ ಬೆಣ್ಣೆ, ಇನ್ನೊಬ್ಬರ ಕಣ್ಣಿಗೆ ಸುಣ್ಣ ಅಂತಾಗಿದೆ. ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಸಾಯೋ ತನಕ ನಾನು ಹೋರಾಟ ಮಾಡುವೆ ಎಂದು ತಿಳಿಸಿದರು.
Laxmi News 24×7