ಮಂಗಳೂರು(ದಕ್ಷಿಣ ಕನ್ನಡ): ಕರಾವಳಿಯ ಪ್ರಸಿದ್ಧ ಜನಪದೀಯ ಕಲೆ ಯಕ್ಷಗಾನ ಮನೋರಂಜನೆ ಮಾತ್ರವಲ್ಲದೆ ಧಾರ್ಮಿಕ ನಂಬುಗೆಯ ಆಚರಣೆಯೂ ಹೌದು. ಅದರಲ್ಲೂ ಶ್ರೀ ಕ್ಷೇತ್ರ ಕಟೀಲು ಯಕ್ಷಗಾನಕ್ಕೆ ವಿಶೇಷ ಧಾರ್ಮಿಕ ಮಹತ್ವವಿದ್ದು, ಕ್ಷೇತ್ರದ ಯಕ್ಷಗಾನಕ್ಕಿರುವ ವಿಪರೀತ ಬೇಡಿಕೆಯಿಂದಾಗಿ ಇದೀಗ ಏಳನೇ ಮೇಳವನ್ನು ಆರಂಭಿಸಲಾಗಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಹೊರಡುವ ಪುರಾತನ ಯಕ್ಷಗಾನ ಮೇಳಗಳು ಕರ್ನಾಟಕದ ಸಾಂಸ್ಕೃತಿಕ ಮತ್ತು ಧಾರ್ಮಿಕ ಜಗತ್ತಿನಲ್ಲಿ ಅಪೂರ್ವ ಸ್ಥಾನ ಪಡೆದಿವೆ. ಈ ಮೇಳಗಳು ಕೇವಲ ಕಲಾ ಪ್ರದರ್ಶನಕ್ಕೆ ಸೀಮಿತವಲ್ಲ, ಅವು ಭಕ್ತಿಯ ಸೇವೆ, ಹರಕೆಯ ಈಡೇರಿಕೆ ಮತ್ತು ದೇವಿಯ ಸಾನ್ನಿಧ್ಯದ ಪ್ರತೀಕವಾಗಿವೆ.
ಸುಮಾರು 20 ವರ್ಷಗಳ ಯಕ್ಷಗಾನ ಸೇವೆ ನೀಡುವ ಮುಂಗಡ ಬುಕ್ಕಿಂಗ್ಗಳು ದಾಖಲಾಗಿರುವುದು ಜನರಲ್ಲಿ ಯಕ್ಷಗಾನದ ಮೇಲಿನ ಆಕರ್ಷಣೆ ಮತ್ತು ಕಟೀಲು ದುರ್ಗೆಯ ಮೇಲಿನ ಅಚಲ ಭಕ್ತಿಯನ್ನು ಸೂಚಿಸುತ್ತದೆ. ರಜತ ದುಯ್ಯಾಲೆಯಲ್ಲಿ ಆರೂಢಳಾದ ನಂದಿನಿ ತಟದ ಮಹಾಮಾತೆ ಶ್ರೀದೇವಿಯ ಪ್ರತೀಕವನ್ನು ಭಕ್ತರು ತಮ್ಮ ಊರುಗಳ ಬಯಲುಗಳಲ್ಲಿ, ಮನೆ-ಮನೆಗಳಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಈ ತಿರುಗಾಟದ ಮೂಲಕ ಒದಗಿಬರುತ್ತದೆ.
ಇಷ್ಟಾರ್ಥ ಸಿದ್ಧಿಗಾಗಿ ಯಕ್ಷಗಾನ ಹರಕೆ: ಮೇ ತಿಂಗಳ ಪತ್ತನಾಜೆಯವರೆಗೆ ನಡೆಯುವ ಈ ಪ್ರದರ್ಶನಗಳು ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಇತರ ಪ್ರದೇಶಗಳಲ್ಲಿ ಭಕ್ತರನ್ನು ಆಕರ್ಷಿಸುತ್ತವೆ. ಕಟೀಲು ಮೇಳದ ಯಕ್ಷಗಾನಕ್ಕೆ ಧಾರ್ಮಿಕ ಹಿನ್ನೆಲೆಯೇ ಮೂಲಾಧಾರ. ಕರುನಾಡಿನಲ್ಲಿ ಅತ್ಯಂತ ಪ್ರಸಿದ್ಧವಾದ ಈ ಕಲೆ ದೇವರ ಸೇವಾರೂಪದಲ್ಲಿ ನಡೆಯುತ್ತದೆ. ಭಕ್ತರು ಸುಖ-ಶಾಂತಿ, ನೆಮ್ಮದಿ, ಕಷ್ಟ ನಿವಾರಣೆ ಅಥವಾ ಇಷ್ಟಾರ್ಥ ಸಿದ್ಧಿಗಾಗಿ ಯಕ್ಷಗಾನ ಹರಕೆ ಹೇಳಿ ಪ್ರದರ್ಶನ ಮಾಡಿಸುತ್ತಾರೆ.
Laxmi News 24×7