ಸಹಕಾರ ಕ್ಷೇತ್ರದಲ್ಲಿ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ನಡೆಯುವುದಿಲ್ಲ: ಶಾಸಕ ಲಕ್ಷ್ಮಣ
ಬೆಳಗಾವಿ: ಎಲ್ಲರ ಒಪ್ಪಿಗೆ, ಸಹಮತದೊಂದಿಗೆ ಅಣ್ಣಾಸಾಹೇಬ ಜೊಲ್ಲೆ ಅಧ್ಯಕ್ಷರಾಗಿ, ರಾಜು ಕಾಗೆಯವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ತಿಳಿಸಿದರು.
ಡಿಸಿಸಿ ಬ್ಯಾಂಕಿನಲ್ಲಿ ನೂತನ ಆಡಳಿತ ಮಂಡಳಿ ಸಭೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬೆಳಗಾವಿ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ನಾವು ಬೆಂಬಲ ಮತ್ತು ಸಹಕಾರ ಕೊಡುತ್ತೇವೆ. ಸೋಲು, ಗೆಲುವಿನ ಪ್ರಶ್ನೆ ಈ ಚುನಾವಣೆಯಲ್ಲಿ ಬರಲ್ಲ. ಸರ್ವಾನುಮತದ ಆಯ್ಕೆ ಆಗಿದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಚುನಾವಣೆ ಇಂದು ಅಂತ್ಯವಾಗಿದೆ. ಆರೋಪ ಪ್ರತ್ಯಾರೋಪ ಸಹಜ ಪ್ರಕ್ರಿಯೆಗಳು. ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಯಾವುದೇ ವಿವಾದ ಸೃಷ್ಟಿ ಆಗದೇ ಇಂದು ಮುಗಿದಿದೆ. ನಿನ್ನೆಯವರೆಗೂ ಕೂಡ ಸಾಕಷ್ಟು ಚರ್ಚೆಗಳು ನಡೆದಿದ್ದವು ಎಂದರು
ಈ ಸಂದರ್ಭದಲ್ಲಿ ಸಹಕಾರಿ ಅನುಭವ ಇರುವ ಅಣ್ಣಾಸಾಹೇಬ ಜೊಲ್ಲೆ ಅಧ್ಯಕ್ಷರಾಗಿದ್ದಾರೆ. ಎಲ್ಲರ ಸಹಮತದೊಂದಿಗೆ ಅವರು ಆಯ್ಕೆಯಾಗಿದ್ದಾರೆ.
ಸುಮಾರು 4 ಲಕ್ಷಕ್ಕಿಂತೂ ಹೆಚ್ಚು ಕೃಷಿ ಕುಟುಂಬಗಳಿಗೆ ಬ್ಯಾಂಕ್ ಸಾಲ ನೀಡಿದೆ. 30 ವರ್ಷಗಳಿಂದ ಈ ಬ್ಯಾಂಕ್ನಲ್ಲಿ ಸೇವೆ ಮಾಡಿಕೊಂಡು ಬಂದಿದ್ದು ನನ್ನ ಸೇವೆ ಮುಂದುವರೆಯಬೇಕು ಅಂತ ಅಥಣಿ ಕ್ಷೇತ್ರದ ಜನರು ನನ್ನ ಮರಳಿ ಕಳಿಸಿದ್ದಾರೆ ಎಂದರು.
ರಮೇಶ ಕತ್ತಿ, ಮಹಾಂತೇಶ ದೊಡ್ಡಗೌಡರ, ಗಣೇಶ ಹುಕ್ಕೇರಿ ಸೇರಿ ಎಲ್ಲರನ್ನೂ ಜನ ಆರಿಸಿ ಕಳಿಸಿದ್ದಾರೆ. ನಾವೆಲ್ಲರೂ ಸಹ ಒಮ್ಮತದ ನಿರ್ಧಾರಕ್ಕೆ ಬಂದು ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಿದ್ದೇವೆ ಎಂದು ಲಕ್ಷ್ಮಣ ಸವದಿ ಹೇಳಿದರು.
Laxmi News 24×7