ಬೆಂಗಳೂರು: ಖಾಸಗಿ ಜಮೀನಿನಲ್ಲಿ ಮಾಲೀಕರ ಪರವಾನಿಗೆಯಿಲ್ಲದೆ ಶವ ಸಂಸ್ಕಾರ ಮಾಡಬಹುದೇ ಎಂಬುದರ ಕುರಿತು ತನ್ನ ನಿಲುವನ್ನು ತಿಳಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ತಮ್ಮ ಒಪ್ಪಿಗೆಯಿಲ್ಲದೇ ಸೊಸೆಯ ಶವವನ್ನು ಮನೆಯ ಬಳಿ ಹೂಳಲಾಗಿದೆ. ಹಾಗಾಗಿ ಸಮಾಧಿಯನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ನಿರ್ದೇಶನ ನೀಡುವಂತೆ ಕೋರಿ ಬಂಗಾರಪೇಟೆಯ ತುರಾಂಡಹಳ್ಳಿಯ ಹೆಚ್. ಗೋಪಾಲಗೌಡ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕ ಸದಸ್ಯಪೀಠ ಈ ನಿರ್ದೇಶನ ನೀಡಿದೆ.
ಅಲ್ಲದೆ, ಯಾವುದೇ ಅನುಮತಿಯಿಲ್ಲದೆ ಶವವನ್ನು ಖಾಸಗಿಯವರ ಆಸ್ತಿಯಲ್ಲಿ ಹೂಳಲು ನೀವು ಅನುಮತಿಸಬಹುದೇ? ಹಾಗೊಂದು ವೇಳೆ ಅದಕ್ಕೆ ಅನುಮತಿಸಿದರೆ ಅದು ಅಪಾಯಕಾರಿ ನಿದರ್ಶನವಾಗುತ್ತದೆ ಮತ್ತು ಸರ್ಕಾರ ಅದನ್ನು ಬೆಂಬಲಿಸಿದರೆ ಮತ್ತು ಕೋರ್ಟ್ ಆದೇಶ ಮಾಡಿದರೆ ಆಗ ಪರಿಸ್ಥಿತಿ ಇನ್ನೂ ಕೆಟ್ಟದಾಗಿರುತ್ತದೆ ಎಂದು ಮೌಖಿಕವಾಗಿ ಹೇಳಿದೆ.
ಜೊತೆಗೆ ನ.24 ರಂದು ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದ ನ್ಯಾಯಾಲಯವು, ಪ್ರತಿವಾದಿಗಳಿಗೆ ಅರ್ಜಿಯ ಪ್ರತಿ ಒದಗಿಸುವಂತೆ ಅರ್ಜಿದಾರರಿಗೆ ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರ ಮಗ ಮತ್ತು ಮೃತ ಸೊಸೆ ಭಿನ್ನಾಭಿಪ್ರಾಯಗಳಿಂದಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಜೊತೆಗೆ ಇವರ ವಿವಾಹ ವಿಚ್ಛೇದನ ಪ್ರಕ್ರಿಯೆಗಳು ನಡೆಯುತ್ತಿದ್ದವು. ಆ ಸಮಯದಲ್ಲಿಅರ್ಜಿದಾರರ ವಾಸಸ್ಥಳದಿಂದ ಸುಮಾರು 25 ಕಿಲೋ ಮೀಟರ್ ದೂರದಲ್ಲಿರುವ ತನ್ನ ಪೋಷಕರ ಮನೆಯಲ್ಲಿ ಸೊಸೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮತ್ತು ಈ ಸಂಬಂಧ ಮೃತರ ತಾಯಿ ಕ್ರಿಮಿನಲ್ ದೂರು ಕೂಡ ದಾಖಲಿಸಿದ್ದರು.
Laxmi News 24×7