ಹಾವೇರಿ: ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರೀಯ ನಾಯಕರಾಗಿದ್ದು, ಅವರಿಗೆ ಆರ್ಎಸ್ಎಸ್ ಬ್ಯಾನ್ ಮಾಡಬೇಕು ಅಂತಾ ಹೇಳುವ ಅಧಿಕಾರವಿದೆ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ತಿಳಿಸಿದರು.
ಹಾವೇರಿ ಜಿಲ್ಲೆಯ ಶಿಗ್ಗಾಂವ್ನಲ್ಲಿ ಇಂದು ಇಂದಿರಾ ಕ್ಯಾಂಟೇನ್ ಉದ್ಘಾಟಿಸಿ ಸಚಿವರು ಮಾತನಾಡಿದರು.
ಈ ವೇಳೆ ಆರ್ಎಸ್ಎಸ್ ಬ್ಯಾನ್ ಕುರಿತಂತೆ ಮಲ್ಲಿಕಾರ್ಜುನ್ ಖರ್ಗೆ ಅವರ ಹೇಳಿಕೆ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ, ಈ ಕುರಿತು ಈಗಾಗಲೇ ಖರ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಬ್ಯಾನ್ ಕುರಿತು ಹೇಳಿಕೆ ನೀಡುವ ಅಧಿಕಾರ ರಾಷ್ಟ್ರೀಯ ನಾಯಕರಾಗಿರುವ ಖರ್ಗೆ ಅವರಿಗಿದೆ ಎಂದು ಪಾಟೀಲ್ ಅಭಿಪ್ರಾಯಪಟ್ಟರು.
ಇದೇ ವೇಳೆ ಕೇಂದ್ರದ ಅನುದಾನ ಕುರಿತು ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಅನುದಾನ ನೀಡುವುದು ಅದರ ಕರ್ತವ್ಯ. ಬೆಳೆ ಹಾನಿಯಾದಾಗ ಕೇಂದ್ರ ಮೊದಲು ಎನ್ಡಿಆರ್ಎಫ್ ಅಡಿಯಲ್ಲಿ ಪರಿಹಾರ ನೀಡಬೇಕು. ನಂತರ ಅದಕ್ಕೆ ರಾಜ್ಯ ಸರ್ಕಾರ ಸೇರಿಸಿ ಪರಿಹಾರ ನೀಡುತ್ತದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಯಾವೆಲ್ಲ ಭರವಸೆಗಳನ್ನು ನೀಡಿದೆಯೋ ಅವುಗಳನ್ನು ಈಡೇರಿಸುವ ಪ್ರಯತ್ನ ಮಾಡುತ್ತಿದೆ. ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಹಾವೇರಿ ಜಿಲ್ಲೆಯ ಜನರ ಸಾಕಷ್ಟು ಬೇಡಿಕೆಗಳನ್ನು ಈಡೇರಿಸಿದ್ದೇನೆ. ಇನ್ನೂ ಹೆಚ್ಚಿನ ಬೇಡಿಕೆಗಳನ್ನು ಈಡೇರಿಸಲು ಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದರು.
Laxmi News 24×7