ಬೆಂಗಳೂರು: ರೂಪಾಂತರ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ಸಂಪೂರ್ಣ ಬ್ರೇಕ್ ಹಾಕಲಾಗಿದ್ದು, ಸಾರ್ವಜನಿಕವಾಗಿ ಜನರು ಒಂದೆಡೆ ಸೇರುವುದನ್ನೂ ನಿಷೇಧಿಸಲಾಗಿದೆ.
ವಿಧಾನಸೌಧದಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಈ ವರ್ಷ ಹೊಸ ವರ್ಷಾಚರಣೆಗೆ ಅವಕಾಶವಿಲ್ಲ. ಬೆಂಗಳೂರು ಮಾತ್ರವಲ್ಲ ಮಂಗಳೂರು, ಚಿಕ್ಕಮಗಳೂರು, ಮಡಿಕೇರಿ ಸೇರಿದಂತೆ ರಾಜ್ಯದ ಯಾವುದೇ ರೆಸಾರ್ಟ್ ಗಳಲ್ಲಿ ಕೂಡ ಸಾರ್ವಜನಿಕರು ಸೇರುವಂತಿಲ್ಲ. ಅಲ್ಲದೇ ಯಾವುದೇ ಡಿಜೆ, ಮ್ಯೂಸಿಕ್ ಪಾರ್ಟಿಗಳನ್ನು ಆಯೋಜನೆ ಮಾಡುವಂತಿಲ್ಲ. ಈ ಬಗ್ಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೂ ಸೂಚನೆ ನಿಡಲಾಗಿದ್ದು, ರೆಸ್ಟೋರೆಂಟ್, ರೆಸಾರ್ಟ್ ಗಳ ಮೇಲೆ ನಿಗಾ ವಹಿಸಲಿದ್ದಾರೆ ಎಂದು ತಿಳಿಸಿದರು.
ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ವರ್ಷ ಹೊಸ ವರ್ಷದಂತು ಜನರು ಸೇರುವ ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಕೋರಮಂಗಲ, ಇಂದಿರಾನಗರಗಳಲ್ಲಿ ಈಬಾರಿ ನಿರ್ಬಂಧ ವಿಧಿಸಲಾಗಿದೆ. ನಾಳೆ ಸಂಜೆಯಿಂದಲೇ ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿಗೆ ಬರಲಿದ್ದು, ಒಂದು ಸ್ಥಳದಲ್ಲಿ 5ಕ್ಕಿಮ್ತ ಹೆಚ್ಚು ಜನರು ಸೇರುವಂತಿಲ್ಲ ಎಂದು ಹೇಳಿದರು.