ಬೆಂಗಳೂರು: ರಾಜ್ಯದಲ್ಲಿ ಸಾಗಿರುವ ಜಾತಿ ಆಧಾರಿತ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ಭಾಗಿಯಾಗಿ ತಮ್ಮ ವಿವರಗಳನ್ನು ಹಂಚಿಕೊಳ್ಳಲು ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಮತ್ತು ಅವರ ಪತ್ನಿಯೂ ಆಗಿರುವ ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ನಿರಾಕರಿಸಿದ್ದಾರೆ.
ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಗಣತಿಯ ಸಮೀಕ್ಷೆಯಲ್ಲಿ ತಾವು ಹಾಗೂ ತಮ್ಮ ಕುಟುಂಬದ ಸದಸ್ಯರು ಭಾಗಿಯಾಗುವುದಿಲ್ಲ ಎಂಬ ಸ್ವಯಂ ದೃಢೀಕರಣ ಪತ್ರಕ್ಕೆ ಸಹಿ ಹಾಕಿ, ಆಯೋಗಕ್ಕೆ ನೀಡಿದ್ದಾರೆ.
ರಾಜ್ಯ ಸರ್ಕಾರದ ಈ ಯೋಜನೆಯಲ್ಲಿ ಭಾಗಿಯಾಗಲು ನಿರಾಕರಿಸಿರುವ ಕಾರಣವನ್ನು ತಿಳಿಸಿರುವ ಅವರು, ತಾವು ಯಾವುದೇ ಹಿಂದುಳಿತದ ವರ್ಗಕ್ಕೆ ಸೇರಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಈ ಗಣತಿಯ ಸಮೀಕ್ಷೆಯಲ್ಲಿ ಭಾಗಿಯಾಗುವುದರಿಂದ ಯಾವುದೇ ಕೊಡುಗೆ ನೀಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ತಾವು ಸಮೀಕ್ಷೆಯಲ್ಲಿ ಭಾಗಿಯಾಗುತ್ತಿಲ್ಲ ಎಂದು ವಿವರಣೆಯನ್ನು ನೀಡಿ ನಾರಾಯಣ ಮೂರ್ತಿ ಅವರು ಪತ್ರಕ್ಕೆ ಸಹಿ ಹಾಕಿ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ.
ವೈಯಕ್ತಿಕ ಕಾರಣಗಳ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ದಂಪತಿ ತಿಳಿಸಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತಮ್ಮ ವಿವರಗಳನ್ನು ಬಹಿರಂಗಪಡಿಸಲು ಅವರು ಒಪ್ಪಿಲ್ಲ.
ಅದು ಅವರ ಆಯ್ಕೆ ಎಂದ ಡಿಸಿಎಂ DKS: ಮೂರ್ತಿ ದಂಪತಿಗಳು ಸಮೀಕ್ಷೆಯಲ್ಲಿ ಭಾಗಿಯಾಗಲು ನಿರಾಕರಿಸಿರುವ ನಿರ್ಧಾರದ ಕುರಿತು ಪ್ರಶ್ನೆಗೆ ಉತ್ತರಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ಇದು ವೈಯಕ್ತಿಕ ವಿಚಾರ. ಯಾರನ್ನೂ ಭಾಗಿಯಾಗಿ ಎಂದು ನಾವು ಒತ್ತಾಯಿಸಲು ಸಾಧ್ಯವಿಲ್ಲ. ಅದು ಅವರ ಆಯ್ಕೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಿಂದ ಜಾತಿ ಜನಗಣತಿ ಎಂದು ಕರೆಯಲಾಗುತ್ತಿರುವ ಈ ಸಾಮಾಜಿಕ ಆರ್ಥಿಕ ಸಮೀಕ್ಷೆಯನ್ನು ರಾಜ್ಯಾದ್ಯಂತ ನಡೆಸಲಾಗುತ್ತಿದೆ. ಇದರ ಮೂಲಕ ರಾಜ್ಯದ ಜನರ ಜಾತಿ, ಆದಾಯ, ಶಿಕ್ಷಣ ಮತ್ತು ಇತರ ಸಾಮಾಜಿಕ ಆರ್ಥಿಕ ಸೂಚಕಗಳ ಕುರಿತು ವಿವರವಾದ ದತ್ತಾಂಶವನ್ನು ಸಂಗ್ರಹಿಸಲಾಗುತ್ತಿದೆ. ರಾಜ್ಯದ ಹಿಂದುಳಿದ ವರ್ಗಗಳ ಆಯೋಗವು ಈ ಸಮೀಕ್ಷೆಯನ್ನು ನಿರ್ವಹಿಸುತ್ತಿದ್ದು, ಇದರಲ್ಲಿ 60 ಪ್ರಾಥಮಿಕ ಪ್ರಶ್ನೆಗಳು ಮತ್ತು 20 ಉಪ ಪ್ರಶ್ನೆಗಳಿವೆ.
ಆರಂಭದಲ್ಲಿ ಅಕ್ಟೋಬರ್ 7ರೊಳಗೆ ಜಾತಿಗಣತಿಯನ್ನು ಮುಗಿಸಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಆದರೆ, ಸಮೀಕ್ಷೆ ಪೂರ್ಣಗೊಳ್ಳದ ಕಾರಣ ಇದನ್ನು ವಿಸ್ತರಣೆ ಮಾಡಲಾಗಿದ್ದು, ರಾಜ್ಯದಲ್ಲಿ ಅಕ್ಟೋಬರ್ 12 ಹಾಗೂ ಬೆಂಗಳೂರಿನಲ್ಲಿ ಅಕ್ಟೋಬರ್ 24ರವರೆಗೆ ಮುಕ್ತಾಯದ ದಿನಾಂಕ ವಿಸ್ತರಿಸಲಾಗಿದೆ. ಶಿಕ್ಷಕರು ಗಣತಿ ಕಾರ್ಯ ಸುಗಮವಾಗಿ ಪೂರ್ಣಗೊಳಿಸುವಿಕೆಗೆ ಶಾಲೆಗಳ ಸಮಯವನ್ನು ಬೆಳಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೆ ಅರ್ಧ ದಿನದ ವೇಳಾಪಟ್ಟಿಯಲ್ಲಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ.
ರಾಜ್ಯದಲ್ಲಿ ಒಟ್ಟು 1.43 ಕೋಟಿ ಕುಟುಂಬಗಳಲ್ಲಿ ಸುಮಾರು 1.22 ಕೋಟಿ ಕುಟುಂಬಗಳು – ಸುಮಾರು 83 ಪ್ರತಿಶತ ಕುಟುಂಬಗಳು ಸಮೀಕ್ಷೆಯ ವ್ಯಾಪ್ತಿಗೆ ಬಂದಿವೆ ಎಂದು ಅಧಿಕಾರಿಗಳು ಅಕ್ಟೋಬರ್ ಆರಂಭದಲ್ಲಿ ತಿಳಿಸಿದ್ದರು.
Laxmi News 24×7