ಬೆಳಗಾವಿ: ಬೇರೆ ಮಹಿಳೆಯರ ಜೊತೆಗೆ ತನ್ನ ಗಂಡ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಅನುಮಾನಿಸಿ ಸುಡುವ ಎಣ್ಣೆ ಮೈಮೇಲೆ ಎರಚಿ ಮಹಿಳೆಯೊಬ್ಬರು ದುಷ್ಕೃತ್ಯ ಮೆರೆದಿರುವ ಘಟನೆ ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದಲ್ಲಿ ನಡೆದಿದೆ.
ಗಂಭೀರವಾಗಿ ಗಾಯಗೊಂಡ ಸುಭಾಷ್, ಆಸ್ಪತ್ರೆಯಲ್ಲಿ ಚಿಕಿತ್ಸೆ: ಮಚ್ಛೆ ಗ್ರಾಮದ ಶ್ರೀರಾಮನಗರದ ನಿವಾಸಿ ಸುಭಾಷ ಪಾಟೀಲ ಗಂಭೀರವಾಗಿ ಗಾಯಗೊಂಡ ವ್ಯಕ್ತಿ. ಸುಭಾಷ ಪತ್ನಿ ವೈಶಾಲಿ ಕಾಯ್ದ ಎಣ್ಣೆ ಎರಚಿದ ಮಹಿಳೆ. ಸುಡುವ ಎಣ್ಣೆ ಮೈಮೇಲೆ ಬೀಳುತ್ತಿದ್ದಂತೆ ಹೊರಗೆ ಓಡಿ ಬಂದ ಸುಭಾಷ್ ಉರಿತಾಳಲಾರದೇ ನೀರಿನ ಟ್ಯಾಂಕ್ನಲ್ಲಿ ಬಿದ್ದು ಉರುಳಾಡಿದ್ದಾರೆ. ಬಳಿಕ ಕುಟುಂಬಸ್ಥರು ಮತ್ತು ಸ್ಥಳೀಯರು ಸುಭಾಷ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೊಟ್ಟೆ ಭಾಗ ಸಂಪೂರ್ಣ ಸುಟ್ಟಿದ್ದು, ಚಿಕಿತ್ಸೆ ಮುಂದುವರಿದಿದೆ.
ಘಟನೆಯ ವಿವರ ಹೀಗಿದೆ: ಮನೆ ಮನೆಗೆ ಗ್ಯಾಸ್ ಸಿಲಿಂಡರ್ ಪೂರೈಕೆ ಕೆಲಸ ಮಾಡುವ ಸುಭಾಷ ಪಾಟೀಲ ಎಂದಿನಂತೆ ನಿನ್ನೆ ಕೆಲಸ ಮುಗಿಸಿ, ಮನೆಗೆ ಬಂದು ಕುರ್ಚಿ ಮೇಲೆ ಕುಳಿತಿದ್ದರು. ಈ ವೇಳೆ ಶಾಂಡಿಗೆ ಮಾಡಲು ಕಾಯಿಸಿಟ್ಟಿದ್ದ ಎಣ್ಣೆಯನ್ನು ಪತಿಯ ಮೈಮೇಲೆ ಸುರಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಬಗ್ಗೆ ಪೊಲೀಸ್ ಕಮಿಷನರ್ ಪ್ರತಿಕ್ರಿಯೆ: ಪ್ರಕರಣ ಕುರಿತು ಪೊಲೀಸ್ ಕಮಿಷನರ್ ಭೂಷಣ ಬೊರಸೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಸುಭಾಷ ಪಾಟೀಲ ಮತ್ತು ಅವರ ಪತ್ನಿ ವೈಶಾಲಿ ಅವರ ನಡುವೆ ಜಗಳ ಆಗಿದೆ. ಈ ವೇಳೆ ವೈಶಾಲಿ ಸುಭಾಷ ಅವರ ಮೇಲೆ ಬಿಸಿ ಎಣ್ಣೆ ಹಾಕಿದ್ದಾರೆ. ಅವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿ ವೈಶಾಲಿ ಅವರನ್ನು ವಶಕ್ಕೆ ಪಡೆದಿದ್ದೇವೆ. ಗಂಡ ಹೆಂಡತಿ ಜಗಳ ಆಗಿದೆ. ಯಾವ ಕಾರಣಕ್ಕೆ ಎಣ್ಣೆ ಸುರಿದಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಲಿದೆ ಎಂದಿದ್ದಾರೆ.
Laxmi News 24×7