ಬೆಂಗಳೂರು: ಇವತ್ತಿನಿಂದ ಸರ್ವೆ ಕಾರ್ಯ ಚುರುಕಾಗಿ ಆಗಲಿದೆ. ಯಾವುದೇ ಕಾರಣಕ್ಕೂ ಸಮೀಕ್ಷೆಯ ಅವಧಿ ವಿಸ್ತರಣೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿ ಬಗ್ಗೆ ಕೃಷ್ಣಾದಲ್ಲಿಂದು ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಅವರು ಮಾತನಾಡಿದರು.
ಸಮೀಕ್ಷೆ ವಿಚಾರಕ್ಕೆ ಡಿಸಿ, ಸಿಇಒಗಳ ಜೊತೆಗೆ ಸಭೆ ನಡೆಸಿದ್ದೇವೆ. ರಾಜ್ಯದ ಏಳು ಕೋಟಿ ಜನರ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಮಾಡುತ್ತಿದ್ದೇನೆ. ಆರಂಭಿಕ ನಾಲ್ಕು ದಿನಗಳಲ್ಲಿ ತಾಂತ್ರಿಕ ತೊಂದರೆಯಿಂದ ಸರ್ವೆ ಕಾರ್ಯ ಕುಂಠಿತ ಆಗಿತ್ತು. ಜಿಲ್ಲಾಧಿಕಾರಿಗಳು ಹೇಳುವ ಪ್ರಕಾರ 90% ಸಮಸ್ಯೆ ಪರಿಹಾರ ಆಗಿದೆ. ಉಳಿದ ಸಮಸ್ಯೆ ಕೂಡ ಪರಿಹಾರ ಇವತ್ತು ಆಗುತ್ತದೆ. ನಾನು ಕಮಿಷನರ್, ಆಯೋಗದ ಅಧ್ಯಕ್ಷರಿಗೆ ಹೇಳಿದ್ದೇನೆ. ಏನೇನು ತೊಡಕುಗಳಿವೆಯೋ ಅವುಗಳ ನಿವಾರಣೆ ಆಗಬೇಕು. ಎಲ್ಲ 100% ಸಮಸ್ಯೆಗಳು ಪರಿಹಾರ ಆಗಬೇಕು. ನಾಲ್ಕು ದಿನಗಳ ಸರ್ವೆ ಸರಿಯಾಗಿ ಆಗಿಲ್ಲ. ಅದನ್ನು ಉಳಿದ ದಿನಗಳಲ್ಲಿ ಕವರ್ ಮಾಡಬೇಕು. ನಾವೇನು ನಿರೀಕ್ಷೆ ಮಾಡಿದ್ದೇವೋ ಅದೇ ಅವಧಿಯಲ್ಲಿ ಆಗಬೇಕು ಎಂದು ಸೂಚನೆ ನೀಡಿದ್ದೇನೆ ಎಂದರು.
ಸಮೀಕ್ಷೆ ಕಾರ್ಯ ರಾಜ್ಯಾದ್ಯಂತ ಆರಂಭವಾಗಿದ್ದು, ಆರಂಭದಲ್ಲಿ ಕೆಲವು ತಾಂತ್ರಿಕ ತೊಂದರೆಗಳ ಕಾರಣ ಸಮೀಕ್ಷೆ ನಿಧಾನವಾಗಿತ್ತು. ಈಗ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಇಂದಿನಿಂದ ಸಮೀಕ್ಷೆ ಕಾರ್ಯವನ್ನು ಚುರುಕುಗೊಳಿಸಲು ಎಲ್ಲಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಸಮೀಕ್ಷೆ ಕಾರ್ಯಕ್ಕೆ ಯಾವುದೇ ತಾಂತ್ರಿಕ ತೊಂದರೆಗಳು ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ತಾಂತ್ರಿಕ ತೊಂದರೆಗಳು ಎದುರಾದರೆ ತಕ್ಷಣ ಅದನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಸಮೀಕ್ಷೆ ಕಾರ್ಯವನ್ನು ಎಲ್ಲಾ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
Laxmi News 24×7