ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ವಾಗ್ದಾಳಿ ಮುಂದುವರಿಸಿದ್ದಾರೆ. ಆಕೆ ವರಿಷ್ಠರು ಹೇಳುವಷ್ಟು ದೊಡ್ಡ ಲೀಡರ್ ಅಲ್ಲ. ನನ್ನ ಹಿತೈಷಿಗಳು ಆಕೆಯ ಬಗ್ಗೆ ಮಾತನಾಡಬೇಡ ಎಂದಿದ್ದಕ್ಕೆ ಮಾತನಾಡುವುದನ್ನು ಬಿಟ್ಟಿದ್ದೇನೆ ಎಂದು ಹೇಳುವ ಮೂಲಕ ಮತ್ತೆ ತಿರುಗೇಟು ಕೊಟ್ಟಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಮೇಶ ಜಾರಕಿಹೊಳಿ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಮಾತನಾಡಬೇಡ ಎಂದು ವರಿಷ್ಠರು ಹೇಳುವಷ್ಟು ಆಕೆ ದೊಡ್ಡ ಲೀಡರ್ ಅಲ್ಲ. ನಮ್ಮ ಹಿತೈಷಿಗಳು ಹೆಣ್ಣು ಮಗಳ ಬಗ್ಗೆ ಮಾತನಾಡುವುದು ಬೇಡ ನಾವು ಏನು ಮಾಡಬೇಕೋ, ಅದನ್ನು ಚುನಾವಣೆಯಲ್ಲಿ ಮಾಡಿ ನಮ್ಮ ಶಕ್ತಿ ತೋರಿಸೋಣ ಪದೇ ಪದೇ ಮಾತನಾಡುವುದು ಬೇಡ ಎಂದಿದ್ದಕ್ಕೆ ಬಿಟ್ಟಿದ್ದೇನೆ ಎಂದು ಟಾಂಗ್ ಕೊಟ್ಟರು.
ಇದೇ ವೇಳೆ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ನಿಮ್ಮ ಕ್ಯಾಲೇಂಡರ್ಗಳನ್ನು ವಿತರಣೆ ಮಾಡುತ್ತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ರಮೇಶ ಜಾರಕಿಹೊಳಿ ಯಾಕೆ ಮಾಡಿದ್ರೆ ಏನು ಮಹಾಪರಾಧವೇ ಎಂದು ಪ್ರಶ್ನಿಸಿದರು. ಇದರಲ್ಲಿ ವಿಶೇಷ ಏನೂ ಇಲ್ಲ. ಗ್ರಾಮೀಣ ಕ್ಷೇತ್ರವನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳುವ ಸಂಕಲ್ಪ ಮಾಡಿದ್ದೇವೆ. ಅದಕ್ಕೆ ಪ್ರಯತ್ನ ಮಾಡಿದ್ದೇವೆ. ಗೆಲ್ಲಿಸೋದು, ಬೀಳಿಸೋದು ಅಲ್ಲಿನ ಮತದಾರರ ನಿರ್ಧಾರವಾಗಿದೆ ಎಂದರು.
ಒಟ್ಟಾರೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಸಲು ಪಣ ತೊಟ್ಟಿರುವ ರಮೇಶ ಜಾರಕಿಹೊಳಿ. ದಿನದಿಂದ ದಿನಕ್ಕೆ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯನ್ನು ಬಲಿಷ್ಠಗೊಳಿಸುತ್ತಿದ್ದು. ಇದಕ್ಕೆಲ್ಲಾ ಲಕ್ಷ್ಮೀ ಹೆಬ್ಬಾಳ್ಕರ್ ಯಾವ ರೀತಿಯ ರಣತಂತ್ರ ಹೆಣೆಯುತ್ತಾರೆ ಎಂದು ಕಾಯ್ದು ನೋಡಬೇಕಿದೆ.