ಮೈಸೂರು : ಹಿಂದುಳಿದ ಆಯೋಗ ಸಮೀಕ್ಷೆಗೆ ಬಂದಾಗ ಧರ್ಮದ ಕಾಲಂನಲ್ಲಿ ಹಿಂದೂ ಎಂದು, ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ನಮೂದು ಮಾಡಬೇಕೆಂದು ತೀರ್ಮಾನ ಮಾಡಿದ್ದೇವೆ. ಇದೇ ರೀತಿ ಸಮಾಜದವರು ನಮೂದಿಸಬೇಕೆಂದು ತಿಳಿಸುತ್ತೇವೆ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮೀಕ್ಷೆ ಮಾಡಲು ಬಂದಾಗ ಲಿಂಗಾಯತ ಪಂಚಮಸಾಲಿ, ವೀರಶೈವ ಪಂಚಮಸಾಲಿ ಎಂಬ ವಿಚಾರವಿದೆ. ನಾವು ಏನನ್ನು ನಮೂದಿಸಬೇಕು ಎಂಬ ಚರ್ಚೆ ನಡೆಯಿತು ಎಂದಿದ್ದಾರೆ.
1,400 ಜಾತಿಗಳ ಪಟ್ಟಿ ಇತ್ತು, ಮತ್ತೆ 1,561 ಜಾತಿಗಳು ಆಯ್ತು. ಹಿಂದುಳಿದ ವರ್ಗದ ಆಯೋಗ ಸಾಕಷ್ಟು ಗೊಂದಲಗಳನ್ನು ಸೃಷ್ಟಿ ಮಾಡಿದೆ. ಕ್ರಿಶ್ಚಿಯನ್ ಲಿಂಗಾಯತ, ಮಡಿವಾಳ ಕ್ರಿಶ್ಚಿಯನ್ ಅಂತ ಮಾಡಿದ್ದಾರೆ. ಇದೆಲ್ಲ ಯಾರು ಮಾಡಿದ್ರು, ಯಾಕೆ ಮಾಡಿದ್ರು? ಈ ರೀತಿ ಗೊಂದಲ ಸೃಷ್ಟಿ ಮಾಡಬಾರದು ಎಂದು ಹೇಳಿದ್ದಾರೆ.
ಇದು ರಾಜ್ಯದ 7 ಕೋಟಿ ಜನರ ಭವಿಷ್ಯ, ಇದೇ ಹಿಂದಿನ ಸಮೀಕ್ಷೆಯನ್ನು ಯಾರೂ ಒಪ್ಪಿಲ್ಲ. ಈಗ ತರಾತುರಿಯಲ್ಲಿ 15 ದಿನದಲ್ಲಿ ಸಮೀಕ್ಷೆ ಮಾಡಲು ಮುಂದಾಗಿದ್ದಾರೆ. ಇಷ್ಟೊಂದು ಅವಸರ ಬೇಡ. ಗೊಂದಲ ಸರಿಪಡಿಸಿಕೊಂಡು ಸಮೀಕ್ಷೆ ಮಾಡಿ, ಅಖಂಡ ಹಿಂದೂಗಳನ್ನು ಒಡೆಯುವ ಹುನ್ನಾರ ಇದರಲ್ಲಿ ಕಾಣುತ್ತಿದೆ. ಹಿಂದೂಗಳ ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಯತ್ನ ಆಗ್ತಿದೆ. ಇಡೀ ದೇಶದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆ ಮಾಡುವ ನಿಟ್ಟಿನಲ್ಲಿ ಒಂದಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Laxmi News 24×7