ಮುಂಬೈ: ಕೊರೊನಾದಿಂದಾಗಿ ವೃದ್ಧರು ಹೆಚ್ಚು ಸಾವನ್ನಪ್ಪಿದ್ದಾರೆ ಎಂಬ ಆತಂಕದ ನಡುವೆಯೇ 101 ವರ್ಷದ ವೃದ್ಧರೊಬ್ಬರು ಕೊರೊನಾ ಗೆದ್ದು ಬಂದಿರುವ ಅಪರೂಪದ ಪ್ರಕರಣ ನಡೆದಿದೆ.
ಮುಂಬೈನ ಹಿಂದೂ ಹೃದಯ ಸಾರ್ಮಾಟ್ ಬಾಳಾಸಾಹೇಬ್ ಠಾಕ್ರೆ ಆಸ್ಪತ್ರೆಯಿಂದ ಅರ್ಜುನ್ ಗೋವಿಂದ್ ನರಿಂಗ್ರೆಕರ್ ಅವರು ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಇನ್ನೂ ವಿಶೇಷವೆಂದರೆ ನರಿಂಗ್ರೆಕರ್ ಅವರು ಡಿಸ್ಚಾರ್ಜ್ ಆಗುವುದಕ್ಕೂ ಹಿಂದಿನ ದಿನವೇ ತಮ್ಮ 101ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಮೂಲಕ ಡಬಲ್ ಖುಷಿಯಲ್ಲಿ ಮುಳುಗಿದ್ದಾರೆ. ಈ ಮೂಲಕ ವ್ಯದ್ಯರಿಗೂ ಆಶ್ಚರ್ಯವನ್ನುಂಟು ಮಾಡಿದ್ದಾರೆ.
ಇದೇ ಮೊದಲಲ್ಲ ಈ ಹಿಂದೆ ಸಹ ಹಲವು ವೃದ್ಧರು ಕೊರೊನಾ ಗೆದ್ದಿದ್ದು, ಜೂನ್ 12ರಂದು 93 ವರ್ಷದ ವ್ಯಕ್ತಿ ಕೊರೊನಾದಿಂದ ಗುಣಮುಖರಾಗಿ ಆಗ್ರಾದ ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಈ ಮೂಲಕ ವೃದ್ಧರು ಸಹ ಕೊರೊನಾದಿಂದ ಗುಣಮುಖರಾಗುವ ಮೂಲಕ ಭರವಸೆ ಮೂಡಿಸಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದರು. ಇತ್ತೀಚೆಗೆ ರಾಜ್ಯದಲ್ಲಿ ಸಹ ಅಜ್ಜಿಯೊಬ್ಬರು ಕೊರೊನಾದಿಂದ ಗುಣಮುಖರಾಗಿದ್ದರು.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಇತರರಿಗಿಂತ ವೃದ್ಧರಿಗೆ ಹಾಗೂ ಈಗಾಗಲೇ ಇತರೆ ಖಾಯಿಲೆಗಳಿರುವವರಿಗೆ ಕೊರೊನಾ ಹೆಚ್ಚು ಕಾಡುತ್ತದೆ ಎಂದು ಹೇಳಿದೆ. ಅಲ್ಲದೆ ವೃದ್ಧರಲ್ಲಿ ಕೊರೊನಾ ವೈರಸ್ ಕಂಡು ಬಂದರೆ ಅವರಿಗೆ ಹೇಗೆ ಚಿಕಿತ್ಸೆ ನೀಡಬೇಕು ಎಂಬುದರ ಕುರಿತು ಪ್ರತ್ಯೇಕಮಾರ್ಗಸೂಚಿಗಳನ್ನು ಸಹ ವಿಶ್ವ ಆರೋಗ್ಯ ಸಂಸ್ಥೆ ರೂಪಿಸಿದೆ. ಇದೇ ರೀತಿ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದೆ. ಆದರೆ ಇದೀಗ ದೇಶದಲ್ಲಿ ಹೆಚ್ಚು ವೃದ್ಧರು ಕೊರೊನಾದಿಂದಾಗಿ ಗುಣಮುಖರಾಗುವ ಮೂಲಕ ಇತರರಲ್ಲಿ ಭರವಸೆ ಮೂಡಿಸಿದ್ದಾರೆ.