ಮಳವಳಿ, ಡಿ.8- ಮಂಗಳವಾದ್ಯದೊಡನೆ ಶಾಸ್ತ್ರೋಕ್ತವಾಗಿ ಮಾಂಗಲ್ಯ ಧಾರಣೆ ಮಾಡಿಸಿ ಸಿಹಿ ಊಟ ಹಾಕಿಸುವ ಮೂಲಕ ವಿವಾಹ ಮಾಡುವುದು ನಮ್ಮ ಹಿಂದು ಸಂಪ್ರದಾಯದ ವಾಡಿಕೆ. ಆದರೆ ಯಾವುದೇ ಮಂತ್ರ ಪಟಣವಿಲ್ಲದೇ ಹಿತೈಷಿಗಳ ಸಮ್ಮುಖದಲ್ಲಿ ಮಾಂಗಲ್ಯ ಕಟ್ಟುವುದರ ಜತೆಗೆ ಮಧುವೆಗೆ ಬಂದವರಿಗೆ ಬಾಡೂಟ ಉಣಬಡಿಸಿದ ವಿವಾಹ ಸಮಾರಂಭ ಪಟ್ಟಣದ ಪಟ್ಟಲದಮ್ಮ ದೇವಸ್ಥಾನದ ಆವರಣ ಜರುಗಿತು.
ತಾಲೂಕಿನ ಹೊಸಹಳ್ಳಿ ಗ್ರಾಮದ ಚಂದ್ರಶೇಖರ ಎಂಬುವರ ಪುತ್ರ ಶಿವಲಿಂಗೇಗೌಡ ಹಾಗೂ ಕೋಡಿಪುರದ ಸಿದ್ದೇಗೌಡರ ಪುತ್ರಿ ಶೃತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು. ವಧು-ವರ ಇಬ್ಬರೂ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು.
ಎರಡೂ ಕುಟುಂಬಗಳ ಸಮ್ಮತಿಯ ಮೇರೆಗೆ ವಿವಾಹ ನಿಶ್ವಯಮಾಡಲಾಗಿತ್ತು. ಸಮಾಜದಲ್ಲಿನ ಮೂಡನಂಬಿಕೆಯ ಕಂದಾಚಾರ ಮತ್ತು ಪೌರೋಹಿತ್ಯ ಸಂಪ್ರದಾಯವನ್ನು ವಿರೋಸುವ ಸಿಪಿಐ(ಎಂ) ಸಿದ್ಧಾಂತದ ಮನೋಭಾವವನ್ನು ಅಳವಡಿಸಿಕೊಂಡಿರುವ ಈ ಇಬ್ಬರೂ ಪ್ರೇಮಿಗಳು ಸರಳವಾಗಿ ಕುಟುಂಬದವರು ಮತ್ತು ಸಂಘಟನೆಯ ಮುಖಂಡರ ಸಮ್ಮುಖದಲ್ಲಿ ಯಾವುದೇ ಶಾಸ್ತ್ರ ಹಾಗೂ ಮಂಗಳವಾದ್ಯವಿಲ್ಲದೇ ವಿವಾಹವಾದರು.
ಬಂಧು-ಬಾಂಧವರಿಗೆ ಮಾಂಸಾಹಾರದ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಸಿಐಟಿಯು ರಾಜ್ಯಧ್ಯೆಕ್ಷೆ ಎಸ್.ವರಲಕ್ಷಿ, ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆ ದೇವಿ, ಜೆಎಂಎಸ್ ಸಂಘಟನೆ ಜಿಲ್ಲಾಧ್ಯಕ್ಷೆ ಶೋಭಾ, ಸಂಘಟನೆ ಮುಖಂಡರಾದ ಶಿವಮೂರ್ತಿ ಕಿಲಾರ, ಭರತ್ ರಾಜ್, ತಿಮ್ಮೇಗೌಡ, ಸುಶೀಲ, ಮಂಜುಳ, ಉಪನ್ಯಾಸಕಿ ಕೆಂಪಮ್ಮ ಸೇರಿದಂತೆ ಕುಟುಂಬ ವರ್ಗದವರು ವಿವಾಹ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.