ಬೆಳಗಾವಿ : ಮಡಿಕೇರಿಯಲ್ಲಿ ನಿನ್ನೆಅನ್ನದಾತರ ಬಗ್ಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಹೇಳಿಕೆಗೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಾಗ್ದಾಳಿ ಮಾಡಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಸಚಿವ ಬಿ.ಸಿ.ಪಾಟೀಲ್ ರೈತನ ಮಗನಾಗಿದ್ದಾರೆ. ಕೃಷಿ ಮಂತ್ರಿಗಳಾಗಿ, ರೈತರ ಬಗ್ಗೆ ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ. ಬಿಜೆಪಿ ಪಕ್ಷಕ್ಕೆ ಹೊದ ಬಳಿಕ ಅವರ ಸಂಸ್ಕೃತಿ ಬದಲಾಗಿದೆ ಎಂದಿದ್ದಾರೆ.
ಈಚೆಗೆ ಗ್ರಾಮೀಣ ಕ್ಷೇತ್ರದಲ್ಲಿ ಆಪರೇಷನ್ ಕಮಲ ವಿಚಾರವಾಗಿ ಪ್ರತಿಕ್ರಿಯಿಸಿ, ತಮ್ಮ ಪಕ್ಷ ಸಂಘಟಿಸಲು, ವಿರೋಧ ಪಕ್ಷದವರನ್ನು ಸೋಲಿಸಲು ಷಡ್ಯಂತ್ರಗಳು ಸರ್ವೇ ಸಾಮಾನ್ಯ. ರಾಜಕೀಯದಲ್ಲಿ ವೈರಿಗಳು ಹೆಚ್ಚಾಗಿರುತ್ತಾರೆ ಎಂದು ಪರೋಕ್ಷವಾಗಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕಿಡಿ ಕಾರಿದ್ದಾರೆ.
ಇನ್ನೂ ರಾಜ್ಯದಲ್ಲಿ ಅತೀವೃಷ್ಟಿ, ಕೊರೊನಾದಿಂದ ಜನರು ಸಂಕಷ್ಟದಲ್ಲಿ ಇದ್ದಾರೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಪಕ್ಷ ಸಂಘಟನೆ, ಗೆಲುವಿಗೆ ಮಾತ್ರ ಗಮನ ಹರಿಸುತ್ತಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.
ರಾಜ್ಯದ ಜನರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ. ನೆರೆ ಪರಿಹಾರ ಕೇಳಿದ್ರೆ, ಕೊರೊನಾದಿಂದ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ ಎಂಬ ಕಾರಣ ನೀಡುತ್ತಾರೆ. ಆದರೆ ಬೆಳಗಾವಿಯಲ್ಲಿ ಕಾರ್ಯಕಾರಣಿ ಸಭೆ ನಡೆಸಲು ಹಣ ಎಲ್ಲಿಂದ ಬಂತು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನೆ ಮಾಡಿದರು.
ಕೇಂದ್ರ ದಲ್ಲಿ ಬಿಜೆಪಿ ಸರ್ಕಾರವೇ ಆಡಳಿತದಲ್ಲಿದೇ ಆದರೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ, ಕೇಂದ್ರದಿಂದ ಉತ್ತಮ ಸಹಕಾರ ಸಿಗುತ್ತಿಲ್ಲ. ಅನುದಾನ ತರುವಲ್ಲಿ ವಿಫಲರಾಗಿದ್ದಾರೆ. ಬರೀ ಸಂಪುಟ ವಿಸ್ತರಣೆಯೋ ? ಪುನಾರಚನೆಯೋ ಎಂಬ ಸಮಯದಲ್ಲಿ ಕಾಲ ಹರಣ ಮಾಡುತ್ತಿದ್ದಾರೆ ಎಂದರು.