ತುಮಕೂರು, ಡಿ.3- ಕಲ್ಪತರು ನಾಡಿನಲ್ಲಿ ಮತ್ತೊಂದು ಬರ್ಬರ ಹತ್ಯೆ ನಡೆದಿದೆ. ಮಾಜಿ ಮೇಯರ್ ಗಡ್ಡ ರವಿ ಆಪ್ತ ಶಿಷ್ಯ ಹಾಗೂ ಪೊಲೀಸ್ ಮಾಹಿತಿದಾರನಾಗಿದ್ದ ಹುಚ್ಚೆ ಮಂಜು ಅಲಿಯಾಸ್ ಆರ್ಎಕ್ಸ್ ಮಂಜ (33) ಭೀಕರವಾಗಿ ಹತ್ಯೆಯಾದ ಹಳೇ ರೌಡಿ ಶೀಟರ್. ಹೊಸ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್ಪಿ ಕಚೇರಿ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಚೇರಿ ಇರುವ ಬಿ.ಎಚ್.ರಸ್ತೆಯ ಮಂಜುಶ್ರೀ ಲಿಕ್ಕರ್ಸ್ ಎದುರು ನಿನ್ನೆ ರಾತ್ರಿ 10.30ರ ಸಮಯದಲ್ಲಿ ಆರ್ಎಕ್ಸ್ ಮಂಜನ ಬರ್ಬರ ಹತ್ಯೆಯಾಗಿದೆ.
ಮಾಜಿ ಮೇಯರ್ ಗಡ್ಡ ರವಿಯನ್ನು ಈ ಹಿಂದೆ ಬಟವಾಡೆ ಬಳಿ ಸುಜಯ್ ಭಾರ್ಗವ್ ತಂಡ ಹತ್ಯೆ ಮಾಡಿತ್ತು. ನಿನ್ನೆ ಕೊಲೆಯಾದ ಆರ್ಎಕ್ಸ್ ಮಂಜ ಗಡ್ಡ ರವಿಯ ಪರಮಾಪ್ತ ಬಂಟನಾಗಿದ್ದ. ಹಳೇ ರೌಡಿ ಶೀಟರ್ ಆಗಿದ್ದ ಮಂಜನ ವಿರುದ್ಧ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಓಪನ್ ಆಗಿತ್ತು.
ನಿನ್ನೆ ರಾತ್ರಿ ಮಂಜುಶ್ರೀ ಲಿಕ್ಕರ್ನಲ್ಲಿ ಮದ್ಯಪಾನ ಮಾಡಿ ಹೊರ ಬರುತ್ತಿದ್ದಾಗ ಆತನಿಗಾಗಿಯೇ ಕಾಯುತ್ತಿದ್ದ ದುಷ್ಕರ್ಮಿಗಳ ಗ್ಯಾಂಗ್ ಏಕಾಏಕಿ ದಾಳಿ ನಡೆಸಿ ಡ್ರ್ಯಾಗನ್ನಿಂದ ಮಂಜನಿಗೆ ಇರಿದು ಪರಾರಿಯಾಯಿತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಂಜನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ಹೊಸ ಬಡಾವಣೆ ಪೊಲೀಸರು ತಿಳಿಸಿದ್ದಾರೆ.
ಮಾಜಿ ಮೇಯರ್ ಗಡ್ಡ ರವಿಯ ಶಿಷ್ಯನಾಗಿದ್ದ ಮಂಜ ಕೆಲ ವರ್ಷಗಳ ಹಿಂದೆ ಹತ್ಯೆಯಾಗಿದ್ದ ನಗರಸಭೆ ಮಾಜಿ ಕಾಪೆರ್Çರೇಟರ್ ಆಂಜನಪ್ಪ ಅವರ ಬಾಮೈದನಾಗಿದ್ದ. ಬಟವಾಡೆ ಸಮೀಪದ ದೇವರಾಯಪಟ್ಟಣದಲ್ಲಿ ವಾಸಿಸುತ್ತಿದ್ದ ಮಂಜ ಇತ್ತೀಚೆಗೆ ಪೊಲೀಸ್ ಮಾಹಿತಿದಾರನಾಗಿದ್ದುಕೊಂಡು ರೌಡಿ ಚಟುವಟಿಕೆಗಳ ಬಗ್ಗೆ ಖಾಕಿ ಪಡೆಗೆ ಮಾಹಿತಿ ರವಾನಿಸುತ್ತಿದ್ದ ಎನ್ನಲಾಗಿದೆ.