ಬಾಗಲಕೋಟೆ: ಹಂಪ್ಸ್ ನಲ್ಲಾದ ಜಂಪ್ ನಿಂದ ಬೈಕಿನಿಂದ ಬಿದ್ದು ಯೋಧನ ಪತ್ನಿ ಸಾವಿಗೀಡಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಮೂಗನೂರು ಗ್ರಾಮದಲ್ಲಿ ನಡೆದಿದೆ.
ಪುಷ್ಪಲತಾ (35) ಬೈಕ್ ನಿಂದ ಬಿದ್ದು ಮೃತಪಟ್ಟ ಮಹಿಳೆ. ಇವರು ಬಾದಾಮಿ ತಾಲೂಕಿನ ತಿಮ್ಮಸಾಗರ ಗ್ರಾಮದ ನಿವಾಸಿ. ಈಕೆಯ ಪತಿ ವಿಭೂತಿ ಶೇಖರಯ್ಯ ಭಾರತೀಯ ಸೇನೆಯಲ್ಲಿ ಕರ್ತವ್ಯ ಸಲ್ಲಿಸಲು ಇಂದು ಬೆಳಗ್ಗೆ ಜಮ್ಮು-ಕಾಶ್ಮೀರಕ್ಕೆ ಹೊರಡಬೇಕಿತ್ತು.
ಪುಷ್ಪಲತಾ ಹಿರೇ ಮಳಗಾವಿ ಗ್ರಾಮದಲ್ಲಿರುವ ಅವರ ತವರು ಮನೆಗೆ ಪತಿಯ ಜೊತೆಗೆ ಹೊರಟಿದ್ದರು. ಬೈಕ್ನಲ್ಲಿ ಹಿಂದೆ ಕುಳಿತಿದ್ದ ಪುಷ್ಪಲತಾ, ಮಗನ ವೀಡಿಯೋ ಕಾಲ್ ಬಂತು ಎಂದು ಮಾತನಾಡುತ್ತಾ ಇದ್ದರು. ಇದೇ ವೇಳೆ ರಸ್ತೆ ಮಧ್ಯೆ ಇದ್ದ ಹಂಪ್ಸ್ ನಿಂದಾಗಿ ಬೈಕ್ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ವೀಡಿಯೋ ಕಾಲ್ ನಲ್ಲಿ ಮಾತನಾಡುತ್ತಿದ್ದ ಪುಷ್ಪಲತಾ ಅವರು ಕೆಳಗೆ ಬಿದ್ದಾರೆ. ತಲೆಗೆ ಗಂಭೀರ ಗಾಯಗಳಾಗಿದ್ದರಿಂದ ಅವರು ತೀವ್ರ ರಕ್ತ ಸ್ರಾವದಿಂದ ಮೃತಪಟ್ಟಿದ್ದಾರೆ.
ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿಯ ಶವವನ್ನು ಅಪ್ಪಿಕೊಂಡು ಪತಿ ವಿಭೂತಿ ಶೇಕರಯ್ಯ ಗೋಳಾಡಿದ್ದಾರೆ. ಈ ಘಟನೆಯನ್ನು ಕಂಡಿರುವ ರಸ್ತೆಯಲ್ಲಿ ಒಡಾಡುವ ಜನರು ಮರುಕ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳದಲ್ಲಿ ಪತ್ನಿಮಕಳೆದುಕೊಂಡ ಯೋಧನ ಆಕ್ರಂದನ ಮುಗಿಲುಮುಟ್ಟಿತು. ಈ ದೃಶ್ಯ ಕಂಡ ನೆರೆದಿದ್ದವರ ಕಣ್ಣಾಲಿಗಳು ತುಂಬಿದ್ದವು.
ಸ್ಥಳಕ್ಕೆ ಅಮೀನಗಢ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.