ಬೆಂಗಳೂರು: ಜ್ವಾಗರ್ ಕಾರ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿರುವ ಘಟನೆ ನಗರದ ಹೊರ ವಲಯದ ನೆಲಮಂಗಲದಲ್ಲಿ ನಡೆದಿದೆ.
ಮಾದಾವರದ ಹಾಗೂ ಮಾದನಾಯಕನಹಳ್ಳಿ ಮಧ್ಯೆ ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶ ಕೇಂದ್ರದ ಬಳಿ ಜ್ವಾಗರ್ ಕಾರ್ ಬೆಂಕಿಗಾಹುತಿಯಾಗಿದೆ. ಕಾರು ಚಲಿಸುತ್ತಿರುವಾಗ ಬಾನೆಟ್ನಿಂದ ಹೊಗೆ ಕಾಣಿಸಿಕೊಂಡ ತಕ್ಷಣ ಚಾಲಕ ಪರಿಶೀಲನೆ ಮಾಡಲು ಕೆಳಗಡೆ ಇಳಿದಿದ್ದು, ಬಾನೆಟ್ ಬಿಚ್ಚಿ ನೋಡಿದಾಗ ಬೆಂಕಿ ಹೊತ್ತಿಕೊಂಡಿರುವುದು ಕಂಡಿದೆ. ತಕ್ಷಣವೇ ಕಾರಿನಲ್ಲಿದ್ದ ನಾಲ್ವರು ಕೆಳಗಿಳಿದಿದ್ದಾರೆ. ಇದರಿಂದಾಗಿ ಭಾರೀ ಅನಾಹುತ ತಪ್ಪಿದಂತಾಗಿದೆ.
ಓವರ್ ಹೀಟ್ ಆಗಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದ್ದು, ಕಾರು ತುಮಕೂರು ಕಡೆಯಿಂದ ಬೆಂಗಳೂರುಗೆ ಆಗಮಿಸುತ್ತಿತ್ತು. ಸಮಯಪ್ರಜ್ಞೆಯಿಂದಾಗಿ ಕಾರಿನಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.