ಗದಗ: ಗೆಳೆಯರೊಂದಿಗೆ ಈಜಲು ಹೋದ 15 ವರ್ಷದ ಬಾಲಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಅಗಸ್ತ್ಯತೀರ್ಥ ಹೊಂಡದಲ್ಲಿ ಘಟನೆ ನಡೆದಿದೆ. ಬ್ಯಾಡಗಿ ಮೂಲದ ಹರ್ಷವರ್ಧನ್ ಅರಕೇರಿ ಈಜಲು ಬಾರದೆ ಹೊಂಡದಲ್ಲಿ ಸಾವನ್ನಪ್ಪಿದ ಬಾಲಕ. ದೀಪಾವಳಿ ಹಬ್ಬಕ್ಕೆಂದು ಬ್ಯಾಡಗಿಯಿಂದ ಲಕ್ಷ್ಮೇಶ್ವರದ ಸಂಬಂಧಿಕರ ಮನೆಗೆ ಬಂದಿದ್ದ ಬಾಲಕ, ಸ್ಥಳೀಯ ನಾಲ್ಕು ಜನ ಸ್ನೇಹಿತರೊಂದಿಗೆ ಈಜಲು ಹೋಗಿದ್ದಾನೆ. ಬಟ್ಟೆಗಳನ್ನು ಹೊಂಡದ ದಡದಲ್ಲಿಟ್ಟು ನೀರಿಗೆ ಹಾರಿದ್ದಾರೆ.
ಹೊಂಡದಲ್ಲಿದ್ದ ಹೂಳಲ್ಲಿ ಸಿಲುಕಿದ್ದರಿಂದ ಈಜಲು ಬಾರದೆ ಹರ್ಷವರ್ದನ್ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಹರ್ಷವರ್ಧನ್ ಮುಳುಗಿದ್ದನ್ನು ಗಮನಿಸಿದ ಇತರ ಸ್ನೇಹಿತರು, ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಅಗ್ನಿಶಾಮಕದಳದವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರು ಶವಕ್ಕಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಹಬ್ಬಕ್ಕೆಂದು ಬಂದ ಬಾಲಕ ಸಾವನ್ನಪ್ಪಿರುವುದರಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.