ಬೆಂಗಳೂರು: ಕಾಂಗ್ರೆಸಿನ “ಚೊಂಬು’ ಜಾಹೀರಾತಿಗೆ ವಿರುದ್ಧವಾಗಿ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ “ಖಾಲಿ ಚಿಪ್ಪು’ ಅಭಿಯಾನ ಪ್ರಾರಂಭಿಸಿದ್ದು, ಜಾಹೀರಾತು ಸಮರ ಮುಂದುವರಿಸಿದೆ.
“ಕನ್ನಡಿಗರ ಕೈಗೆ ಚಿಪ್ಪು ನೀಡಿದ ಕಾಂಗ್ರೆಸ್’ ಎಂಬ ಶೀರ್ಷಿಕೆಯೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜನರಿಗೆ ಮಾಡಿದೆ ಎನ್ನಲಾದ ಅನ್ಯಾಯವನ್ನು ಎಳೆಎಳೆಯಾಗಿ ಬಿಡಿಸಿಡಲಾಗಿದೆ.ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 4,000 ರೂ. ಕಡಿತ ಮಾಡಿ ರೈತರಿಗೆ ಚಿಪ್ಪು, ದಲಿತರ 11,000 ಕೋಟಿ ರೂ. ದುರ್ಬಳಕೆ ಮಾಡಿ ತಳ ಸಮುದಾಯದ ಕೈಗೆ ಚಿಪ್ಪು, ಕಾವೇರಿ ನೀರು ತಮಿಳುನಾಡಿಗೆ ಬಿಟ್ಟು ಬೆಂಗಳೂರಿಗೆ ಚಿಪ್ಪು ಇತ್ಯಾದಿ ವಿವರವನ್ನು ಬಿಜೆಪಿ ಸಿದ್ಧಪಡಿಸಿದ ವಿನ್ಯಾಸದಲ್ಲಿ ವಿವರಿಸಲಾಗಿದೆ.
ಅದೇ ರೀತಿ ಸೋಮವಾರ ಪತ್ರಿಕೆಗಳಿಗೆ ನೀಡಿದ “ಕಾಂಗ್ರೆಸ್ ಡೇಂಜರ್’ ಜಾಹೀರಾತನ್ನು ಬಿಜೆಪಿಯ ಎಲ್ಲ ಕಾರ್ಯಕರ್ತರು ವಾಟ್ಸ್ ಆಪ್ ಡಿಪಿಗೆ ಬಳಸುವಂತೆಯೂ ಸೂಚನೆ ನೀಡಲಾಗಿದೆ. ಇದರ ಜತೆಗೆ “ಮೋದಿಯವರ ಅಕ್ಷಯಪಾತ್ರೆ/ ಕಾಂಗ್ರೆಸ್ ಖಾಲಿ ಚೊಂಬು’ ಹೆಸರಿನಲ್ಲಿ ಇನ್ನೊಂದು ಮಾಹಿತಿ ಹಂಚಿಕೊಳ್ಳಲಾಗಿದ್ದು ಬಿಜೆಪಿ 2014ರಿಂದ 2024ರ ಅವಧಿಯಲ್ಲಿ 6,99,767 ಲಕ್ಷ ಕೋಟಿ ರೂ. ಕರ್ನಾಟಕಕ್ಕೆ ನೀಡಿದೆ, ಕಾಂಗ್ರೆಸ್ 2004ರಿಂದ 2014ರ ಅವಧಿಯಲ್ಲಿ 1,42,574 ಲಕ್ಷ ಕೋಟಿ ರೂ. ಮಾತ್ರ ನೀಡಿದೆ ಎಂದು ವಿವರಿಸಿದೆ.