ಕಲಬುರಗಿ: ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ಪತಿ ಹಾಗೂ ಪತ್ನಿ ಪಕ್ಷೇತರರಾಗಿ ಕಣದಲ್ಲಿದ್ದು, ವಿಭಿನ್ನ ವಿಚಾರಗಳನ್ನು ಹೇಳುತ್ತಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಕಲಬುರಗಿ ತಾಲ್ಲೂಕಿನ ಕೇರೂರ ಗ್ರಾಮದ ರಮೇಶ ಭೀಮಸಿಂಗ್ ಚವ್ಹಾಣ (39) ಹಾಗೂ ಅವರ ಪತ್ನಿ ಜ್ಯೋತಿ ರಮೇಶ ಚವ್ಹಾಣ (33) ಚುನಾವಣಾ ಕಣದಲ್ಲಿದ್ದಾರೆ.ನಾಮಪತ್ರ ವಾಪಸ್ ಪಡೆಯಲು ಸೋಮವಾರ ಕೊನೆಯ ದಿನವಾಗಿದ್ದರೂ ಇಬ್ಬರೂ ಕಣದಲ್ಲಿ ಉಳಿಯುವ ನಿರ್ಧಾರ ಮಾಡಿದ್ದಾರೆ.
ಮಾಹಿತಿ ಹಕ್ಕು ಕಾರ್ಯಕರ್ತರಾಗಿರುವ ರಮೇಶ ಚವ್ಹಾಣ ಅವರಿಗೆ ಇದು ಐದನೇ ಚುನಾವಣೆ. 2018ರ ವಿಧಾನಸಭೆ ಚುನಾವಣೆ, 2019ರ ಚಿಂಚೋಳಿ ಉಪಚುನಾವಣೆ, 2019ರ ಲೋಕಸಭಾ ಚುನಾವಣೆ, 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿರುವ ರಮೇಶ ಅವರು, ಈ ಬಾರಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
‘ಮದ್ಯ ಮಾರಾಟ ನಿಷೇಧ, ಮಟ್ಕಾದಂತಹ ಜೂಜಾಟ ನಿಷೇಧ, ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಐದು ಸಾವಿರಕ್ಕೂ ಅಧಿಕ ಮತಗಳನ್ನು ಪಡೆದಿದ್ದೆ’ ಎಂದು ರಮೇಶ ಚವ್ಹಾಣ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಮದ್ಯಪಾನದಿಂದಾಗಿ ಕುಟುಂಬಗಳು ಹಾಳಾಗುತ್ತಿದ್ದು, ನಿರುದ್ಯೋಗವೂ ಜಾಸ್ತಿಯಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಚುನಾವಣೆಗೆ ಸ್ಪರ್ಧಿಸಿದ್ದೇನೆ. ಪತಿ ನನ್ನ ಸ್ಪರ್ಧೆಗೆ ಅಡ್ಡಿ ಮಾಡಿಲ್ಲ. ಅವರ ಪಾಡಿಗೆ ಅವರು ಸ್ಪರ್ಧಿಸುತ್ತಾರೆ. ನನ್ನ ಪಾಡಿಗೆ ನಾನು ಸ್ಪರ್ಧಿಸಿದ್ದೇನೆ. ನಮ್ಮ ಮಧ್ಯೆ ಭಿನ್ನಮತ ಇಲ್ಲ. ಒಟ್ಟಿಗೇ ಇದ್ದೇವೆ’ ಎಂದು ಜ್ಯೋತಿ ಚವ್ಹಾಣ ಪ್ರತಿಕ್ರಿಯಿಸಿದ್ದಾರೆ.