ಬರಿದಾದ ಕೃಷ್ಣೆ ಒಡಲು: ನೀರಿನಿಂದ ಹೊರಬಿದ್ದ ಮೀನುಗಾರರ ಬದುಕು
ಚಿಕ್ಕೋಡಿ: ಭೀಕರ ಬರದಿಂದ ಕೃಷ್ಣಾ ಹಾಗೂ ಅದರ ಉಪನದಿಗಳಲ್ಲಿ ನೀರಿನ ಪ್ರಮಾಣ ಕುಸಿದಿದೆ. ನದಿ ದಡದಲ್ಲಿ ಎಲ್ಲಿ ನೋಡಿದರೂ ಸತ್ತ ಮೀನುಗಳ ರಾಶಿ ಕಾಣುತ್ತದೆ. ಬರದಿಂದ ಜಲಚರಗಳ ಮಾರಣಹೋಮವೇ ಆಗಿದೆ. ಮೀನುಗಾರಿಕೆ ನೆಚ್ಚಿಕೊಂಡ ನದಿ ತೀರದ ಗ್ರಾಮಸ್ಥರ ಬದುಕಿಗೂ ಬರೆ ಬಿದ್ದಿದೆ.
ಇನ್ನೊಂದೆಡೆ ಮೀನಿನ ಆಹಾರ ಪ್ರಿಯರಿಗೆ ಕೊರತೆ ಉಂಟಾಗಿದೆ.
ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಹರಿಯುವ ಕೃಷ್ಣಾ ಮಳೆಗಾಲದಲ್ಲಿ ಸಮುದ್ರದಂತೆ ಕಂಡರೆ, ಈಗ ಒಡಲು ಬರಿದಾಗಿ ಮರುಭೂಮಿಯ ಸೆಲೆಯಂತೆ ಕಾಣುತ್ತಿದೆ. ಉಪನದಿಗಳಾದ ವೇದಗಂಗಾ, ದೂಧಗಂಗಾದಲ್ಲೂ ನೀರಿಲ್ಲದೆ ಪ್ರಾಣಿ, ಪಕ್ಷಿಗಳು, ಜಲಚರಗಳು ಪರದಾಡುವಂತಾಗಿದೆ.
ಪ್ರತಿಬಾರಿ ಅತಿ ಹೆಚ್ಚು ಮಳೆಯಾಗುತ್ತಿದ್ದ ಕಾರಣ ಮಹಾರಾಷ್ಟ್ರದ ಮೂರೂ ಅಣೆಕಟ್ಟೆಗಳಿಂದ ಕೃಷ್ಣಾ, ವೇದಗಂಗಾ, ದೂಧಗಂಗಾ ನದಿಗಳಿಗೆ ನೀರು ಹರಿಸಲಾಗುತ್ತಿತ್ತು. ಇದರಿಂದ ಬೇಸಿಗೆಯಲ್ಲೂ ನದಿಗಳು ತುಂಬಿ ಹರಿಯುತ್ತಿದ್ದವು. ಮಳೆಗಾಲ ಮಾತ್ರವಲ್ಲದೇ ಬೇಸಿಗೆಯಲ್ಲೂ ನಿರಂತರ ಮೀನುಗಾರಿಕೆ ನಡೆಯುತ್ತಿತ್ತು. ಇದರಿಂದ 800ಕ್ಕೂ ಹೆಚ್ಚು ಮೀನುಗಾರರ ಕುಟುಂಬಗಳ ಸಾವಿರಾರು ಮಂದಿ ಹಾಗೂ ಮತ್ಸ್ಯೋದ್ಯಮ ನಂಬಿಕೊಂಡ ಹಲವರಿಗೆ ಉದ್ಯೋಗ ಕೂಡ ಸಿಗುತ್ತಿತ್ತು.
ಆದರೆ, ಈ ಬಾರಿ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿಯೇ ಮಳೆ ಕೊರತೆ ಉಂಟಾಗಿದೆ. ದಕ್ಷಿಣ ಭಾಗದ ಎಲ್ಲ ಅಣೆಕಟ್ಟೆಗಳಲ್ಲೂ ಸಾಕಷ್ಟು ನೀರು ಇಲ್ಲ. ಇದರಿಂದ ಹೆಚ್ಚವರಿ ನೀರನ್ನು ಕರ್ನಾಟಕದತ್ತ ಹರಿಸಲು ಸಾಧ್ಯವಾಗಿಲ್ಲ. ಸಹಜವಾಗಿಯೇ ಜಿಲ್ಲೆಯಲ್ಲಿ ಕೂಡ ನದಿ ಒಡಲು ಒಣಗಿದೆ. ಕುಡಿಯುವ ಉದ್ದೇಶಕ್ಕೆ ನೀರು ಬಿಡುವಂತೆ ಈಗಾಗಲೇ ಕರ್ನಾಟಕದ ಅಧಿಕಾರಿಗಳು, ಜನಪ್ರತಿನಿಧಿಗಳು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಕೂಡ ಮಾಡಿದ್ದಾರೆ