ಬೆಳಗಾವಿ : ಹುಬ್ಬಳ್ಳಿಯ ಕಾಲೇಜಿನಲ್ಲಿ ಕೊಲೆಯಾದ ನೇಹಾ ಪ್ರಕರಣದಲ್ಲಿ ಬಿಜೆಪಿ ನಾಯಕರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಈ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಅವರಿಗೆ ನೇಹಾ ಯಾರು ಎಂಬುದೇ ಗೊತ್ತಿರುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಆಕ್ರೋಶ ಹೊರ ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ಇದರಲ್ಲೂ ರಾಜಕೀಯ ಮಾಡಲು ಮುಂದಾಗಿರುವುದು ತುಂಬಾ ನಾಚಿಗೇಡಿತನದ ಸಂಗತಿ. ಬಿಜೆಪಿಯವರು ಜಾಣ ಕುರುಡರಷ್ಟೇ ಅಲ್ಲ ಜಾಣ ಕಿವುಡರು ಹೌದು. ಅವರು ಬೇಕಾದಾಗ ಮೊಸಳೆ ಕಣ್ಣೀರು ಸುರಿಸುತ್ತಾರೆ. ಬೇಡವಾದಾಗ ಕಿವುಡತನ ಇದ್ದ ಹಾಗೇ ವರ್ತಿಸುತ್ತಾರೆ’ ಎಂದರು.
‘ನೇಹಾ ನಮ್ಮ ಸಮಾಜದ ಮಗಳು. ಹತ್ಯೆಯಾದ ತತ್ ಕ್ಷಣವೇ ಖಂಡನೆ ಮಾಡಿದ್ದೇನೆ. ನೇಹಾ ಪಾಲಕರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿ ಬಂದಿದ್ದೇನೆ. ಜವಾಬ್ದಾರಿ ಸ್ಥಾನದಲ್ಲಿ ಇರುವುದರಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ಸರ್ಕಾರದ ಪರವಾಗಿ ಸಾಂತ್ವನ ಹೇಳಿ ಅತ್ಯಂತ ಕಠಿಣ ಶಬ್ಧಗಳಿಂದ ಘಟನೆಯನ್ನು ಖಂಡಿಸಿದ್ದೇನೆ’ ಎಂದರು.
ಬಿಜೆಪಿಯವರು ದೇಶದಲ್ಲಿ ಇಂತಹ ಪ್ರಕರಣಗಳು ಎಷ್ಟ್ಟೆಲ್ಲ ಆಗಿವೆ. ಇದರ ಬಗ್ಗೆ ಅವರ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.