ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಕಾಂಗ್ರೆಸ್ ಸರಕಾರದಿಂದ ತುಘಲಕ್ ದರ್ಬಾರ್ ನಡೆಯುತ್ತಿದೆ ಎಂದು ಮಾಜಿಮುಖ್ಯಮಂತ್ರಿ ಯಡಿಯೂರಪ್ಪ ಆರೋಪಿಸಿದ್ದಾರೆ.
ಜನರು ಬದುಕಿನ ಬಗ್ಗೆ ಗ್ಯಾರಂಟಿ ಕಳೆದುಕೊಂಡಿದ್ದಾರೆ. ಈ ಸರಕಾರದಲ್ಲಿ ಶಾಂತಿ, ನೀರು, ಮಹಿಳೆಯರ ಮಾನಪ್ರಾಣ, ರೈತರ ಬದುಕು, ಭಾವನೆ ಯಾವುದಕ್ಕೂ ಗ್ಯಾರಂಟಿ ಇಲ್ಲದಂತಾಗಿದೆ.
ಗಲಭೆಕೋರರು, ಭಯೋತ್ಪಾದಕರಿಗೆ ರಕ್ಷಣೆಯ ಗ್ಯಾರಂಟಿ ಸಿಗುತ್ತಿದೆ. ವಿದ್ಯುತ್ ದರ ಏರಿಕೆಯ ಗ್ಯಾರಂಟಿ, ವಿವಿಧ ತೆರಿಗೆ ಹೆಚ್ಚಳದ ಗ್ಯಾರಂಟಿ ನೀಡುತ್ತಿದೆ ಎಂದು ದೂರಿದರು.
ರವಿವಾರ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮತಾಂಧ ಶಕ್ತಿ ಬೆಳೆಸುವುದನ್ನೇ ಆಡಳಿತದ ಭಾಗವಾಗಿ ಸಿದ್ದರಾಮಯ್ಯ ಸರಕಾರ ಮಾಡಿಕೊಂಡಂ ತಿದೆ. ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕವನ್ನು ಒಂದೇ ವರ್ಷದಲ್ಲಿ ಮತಾಂಧರ ಯುದ್ಧಭೂಮಿಯಾಗಿ ಪರಿವರ್ತಿಸಿದೆ ಎಂದರು.
ಸಿದ್ದರಾಮಯ್ಯ ಸರಕಾರದಲ್ಲಿ ಕನ್ನಡಿಗರು ಬದುಕಿನ ಗ್ಯಾರಂಟಿಗಳನ್ನು ಕಳೆದುಕೊಂಡಿದ್ದಾರೆ. ಹುಬ್ಬಳ್ಳಿಯ ನೇಹಾ ಹಿರೇಮಠ ಅಮಾನುಷ ಹತ್ಯೆ ಆಗಿದೆ. ತನ್ನದೇ ಪಕ್ಷದ ಚುನಾಯಿತ ಪ್ರತಿನಿಧಿಯ ಮಗಳ ಹತ್ಯೆಗೆ ನ್ಯಾಯ ಒದಗಿಸುವುದು ಬಿಟ್ಟು ಆರೋಪಿಗೆ ರಕ್ಷಣೆ ಭಾಗ್ಯ ಒದಗಿಸಿದ ಸರಕಾರ ಎಂದು ಕಿಡಿ ಕಾರಿದರು.