ಕಲಬುರಗಿ: ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ ಎರಡು ಸಾವಿರ ಬರ ಪರಿಹಾರ ನೀಡಿದೆ ಎಂದು ಬಿಜೆಪಿ ರಾಜ್ಯಾಧಕ್ಷ ಬಿ.ವೈ.ವಿಜಯೇಂದ್ರ ಆರೋಪ ಮಾಡಿದರು.
ನಗರದ ಜಿಲ್ಲಾ ಚುನಾವಣಾ ಕಚೇರಿ ಮುಂಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ್ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬರಗಾಲದಲ್ಲಿ 18-20 ಸಾವಿರ ರೂ.ಪರಿಹಾರ ನೀಡಲಾಗಿದೆ. ಆದರೆ, ಈಗಿನ ಸಿದ್ದರಾಮಯ್ಯ ಸರ್ಕಾರ ಕೇವಲ ಎರಡು ಸಾವಿರ ರೂಪಾಯಿಗಳನ್ನು ಭಿಕ್ಷುಕರಂತೆ ರೈತರಿಗೆ ನೀಡಿದೆ ಎಂದು ಆಪಾದನೆ ಮಾಡಿದರು. ಬರ ಪರಿಹಾರ ಸರಿಯಾಗಿ ನಿರ್ವಹಣೆ ಮಾಡುವಲ್ಲಿ ಸಿದ್ದರಾಮಯ್ಯ ಸರ್ಕಾರ ಸಂಪೂರ್ಣವಾಗಿ ಸೋತಿದೆ ಎಂದರು.
ರಾಜ್ಯ ಸರ್ಕಾರ ಸಂಪೂರ್ಣ ದಲಿತ ವಿರೋಧಿಯಾಗಿದೆ. ಎಸ್ಸಿ ಎಸ್ಟಿ ಅಭ್ಯದಯಕ್ಕಾಗಿ ಮೀಸಲಿರಿಸಿದ್ದ ಎಸ್ಇ ಪಿ/ಟಿ, ಎಸ್ ಪಿ ಅನುದಾನವನ್ನು ಬೇರೆ ಯೋಜನೆಗಳಿಗೆ ಬಳಕೆ ಮಾಡುವ ಮೂಲಕ ದಲಿತರಿಗೆ ಅನ್ಯಾಯ ಮಾಡಿದೆ ಎಂದು ಆರೋಪ ಮಾಡಿದರು.
ಇದಲ್ಲದೆ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿದ್ದು, ಬಿಜೆಪಿ ಸೇರಿದಂತೆ ಇತರೆ ಸಾಮಾನ್ಯ ವರ್ಗದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುತ್ತಿದೆ. ದಬ್ಬಾಳಿಕೆ ನಡೆಯುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದರು.
ಮೂರು ಲಕ್ಷ ಮತ ಲೀಡ್
ಬಿಜೆಪಿ ಅಭ್ಯರ್ಥಿ ಉಮೇಶ್ ಜಾದವ್ ಅವರು ಎಲ್ಲ ವರ್ಗಗಳ ಹಿತ ಕಾಯುವಲ್ಲಿ ಅವರು ಸಂಪೂರ್ಣ ಕೆಲಸ ಮಾಡಿದ್ದಾರೆ. ಅದು ಅಲ್ಲದೆ ದೇಶದಲ್ಲಿ ಮೋದಿ ಅಲೆ ಇದೆ. ಮೋದಿಯವರು ಸರ್ವ ಜನಾಂಗದ ವಿಕಾಸಕ್ಕಾಗಿ ಹಲವಾರು ರಾಷ್ಟ್ರೀಯ ಪ್ರಯೋಜನಾತ್ಮಕ ಕಾರ್ಯಕ್ರಮಗಳನ್ನ ರೂಪಿಸಿದ್ದಾರೆ. ಈ ಬಾರಿ 400 ಸ್ಥಾನ ಗೆಲ್ಲುವ ಯಜ್ಞ ದೇಶದಲ್ಲಿ ನಡೆಯುತ್ತಿದೆ. ಇದರಿಂದಾಗಿ ಈ ಬಾರಿ ಕಲ್ಬುರ್ಗಿ ಲೋಕಸಭೆಯಲ್ಲಿ ನಮ್ಮ ಅಭ್ಯರ್ಥಿ ಜಾಧವ್ ಅವರು, ಮೂರು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.