ತೀರ್ಥಹಳ್ಳಿ : ತಾಲೂಕಿನ ಬೆಜ್ಜವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಉದಯಪುರ, ಬಚ್ಚಿನ ಕೊಡುಗೆ, ಕಿಕ್ಕೇರಿ ಗ್ರಾಮದ ರಸ್ತೆಯ ಪರಿಸ್ಥಿತಿಯ ಬಗ್ಗೆ ಶಾಸಕರು ಸೇರಿದಂತೆ ಹಲವು ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ
ಇಲ್ಲಿಯವರೆಗೆ ಯಾವುದೇ ರೀತಿಯ ಪರಿಹಾರವನ್ನು ಕೊಡದ ಕಾರಣ ಲೋಕಸಭಾ ಚುನಾವಣೆಗೆ ಮತದಾನ ಬಹಿಷ್ಕಾರ ಮಾಡುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಅಕ್ಕಪಕ್ಕದ ಊರಿನ ಗ್ರಾಮದ ರಸ್ತೆಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು ನಮ್ಮ ಊರಿಗೆ ಹೋಗುವ ರಸ್ತೆಯ ಪರಿಸ್ಥಿತಿ ತೀರಾ ಹದಗೆಟ್ಟಿದ್ದು ಮಳೆಗಾಲದಲ್ಲಿ ಗೊಚ್ಚೆಯ ಸಮಸ್ಯೆ ಹಾಗೂ ಬೇಸಿಗೆಯಲ್ಲಿ ಧೂಳಿನ ಸಮಸ್ಯೆ ಇದ್ದು ವರ್ಷಪೂರ್ತಿ ಈ ರಸ್ತೆಯ ಸಮಸ್ಯೆಯಿಂದ ಅನಾರೋಗ್ಯ ಕೂಡ ಹೆಚ್ಚಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಅದೇ ರೀತಿ ಅಕ್ಕಪಕ್ಕದ ಊರಿನ ರಸ್ತೆಯ ನಿರ್ಮಾಣವನ್ನು ನೋಡಿದರೆ ದ್ವೇಷದ ರಾಜಕಾರಣ ನಡೆಯುತ್ತಿರಬಹುದು ಎಂಬ ಶಂಕೆ ವ್ಯಕ್ತಪಡಿಸಿರುವ ಗ್ರಾಮಸ್ಥರು 40 ವರ್ಷಗಳ ರಸ್ತೆಯ ಬೇಡಿಕೆಯು ಬೇಡಿಕೆ ಆಗಿಯೇ ಉಳಿದಿದೆ. ಆದ್ದರಿಂದ ಈ ಊರಿಗೆ ಸೌಲಭ್ಯ ದೊರಕುವವರೆಗೆ ಮುಂದಿನ ಎಲ್ಲಾ ಚುನಾವಣೆಯನ್ನು ಊರಿನ ಗ್ರಾಮಸ್ಥರು ಬಹಿಷ್ಕಾರ ನಡೆಸುವುದಾಗಿ ತಿಳಿಸಿದ್ದಾರೆ.