ಬೆಂಗಳೂರು, ಏಪ್ರಿಲ್ 17: ಕಳೆದ 24 ವರ್ಷದ ಹಿಂದೆ ಕಾರವಾರ ಶಾಸಕರಾಗಿದ್ದ ವಸಂತ್ ಆಸ್ನೋಟಿಕರ್ ಶೂಟೌಟ್ ಪ್ರಕರಣದ ಆರೋಪಿ ಶಾರ್ಪ್ ಶೂಟರ್ ರಾಜನ್ ಅಲಿಯಾಸ್ ಸಂಜಯ್ ಕಿಶನ್ ಮೊಹಿತೆಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೊರ್ಟ್ ಎತ್ತಿಹಿಡಿದಿದೆ.ಹಾಗಾಗಿ ಆತ ಶಿಕ್ಷೆಯನ್ನು ಅನುಭವಿಸಲೇಬೇಕಾಗಿದೆ.
ಪ್ರಕರಣದ ಆರನೇ ಆರೋಪಿಯಾಗಿದ್ದ ಮುಂಬೈ ಪಶ್ಚಿಮದ ಅಂಧೇರಿಯ ಮೂಲದ ಸಂಜಯ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ ಸಂದೇಶ್ ಮತ್ತು ರಾಮಚಂದ್ರ ಹುದ್ದಾರ್ ಅವರಿದ್ದ ಧಾರವಾಠ ಪೀಠ ಈ ಆದೇಶ ನೀಡಿದೆ.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಘಟನೆ ಸಂಬಂಧ ಲಭ್ಯವಿರುವ ಹಲವು ಪ್ರತ್ಯಕ್ಷ ಸಾಕ್ಷ್ಯಿಗಳಿದ್ದು, ಮೇಲ್ಮನವಿದಾರರ ಕೃತ್ಯವನ್ನು ಗುರುತಿಸಿದ್ದಾರೆ. ವಿಚಾರಣಾ ನ್ಯಾಯಾಲಯಕ್ಕೆ ಸಾಕ್ಷ್ಯಗಳನ್ನು ಹೇಳಿಕೆಗಳನ್ನು ನಿಡಿದ್ದಾರೆ. ಕೆಲ ಸಾಕ್ಷ್ಯಧಾರಗಳಲ್ಲಿ ವಿರೋಧಾಭಾಸವಿರಬಹುದು. ಆದರೆ, ಅದಕ್ಕೆಲ್ಲಾ ಖಚಿತ ಆಧಾರಗಳಿವೆ. ಪ್ರತ್ಯಕ್ಷ ಸಾಕ್ಷಿಗಳು ಆರೋಪಕ್ಕೆ ಪೂರಕವಾಗಿದ್ದಾಗ ಇತರೆ ಸಾಕ್ಷಿಗಳನ್ನು ನಂಬ ಬೇಕಾಗುತ್ತದೆ ಎಂದು ತಿಳಿಸಿದೆ.
ಅಲ್ಲದೇ ಗುಂಡಿನ ಸಾಳಿ ಅಸಮಾನ್ಯವಾಗಿತ್ತು. ಕಾರವಾದಂತಹ ನಗರಗಲ್ಲಿ ಈ ರೀತಿಯ ಚಲನಚಿತ್ರಗಳಲ್ಲಿಯೂ ಕಾಣದಂತಹ ಘಟನೆಯಾಗಿದ್ದರ ಪರಿಣಾಮ ಪ್ರತ್ಯಕ್ಷ ಸಾಕ್ಷ್ಯಗಳಿಗೆ ನೆನಪಿನಲ್ಲಿ ಉಳಿಯುವಂತೆ ಆಗಿದೆ ಎಂದು ಪೀಠ ತಿಳಿಸಿದೆ.