ವಿಜಯಪುರ : ಕಾಂಗ್ರೆಸ್ ಪಕ್ಷದಲ್ಲಿ ಭಾರತ ಮಾತಾಕಿ ಜೈ ಎನ್ನಲು ಶಾಸಕ ಲಕ್ಷ್ಮಣ ಸವದಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪರವಾನಿಗೆ ಕೇಳುತ್ತಾರೆ. ಪಾಕಿಸ್ಥಾನ ಜಿಂದಾಬಾದ್ ಎನ್ನಲು ಇವರಿಗೆ ಯಾರ ಪರವಾನಿಗೆ ಬೇಕಿಲ್ಲ. ಪಂಚಾಯತ್ನಿಂದ ಪಾರ್ಲಿಮೆಂಟ್ ವರೆಗೆ ಅವರು ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಾರೆ ಮಾಜಿ ಸಚಿವ ಸಿ.ಟಿ.ರವಿ ಕುಟುಕಿದ್ದಾರೆ.
ಮಂಗಳವಾರ ವಿಜಯಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ರಮೇಶ ಜಿಗಜಿಣಗಿ ಪರ ಬಹಿರಂಗ ನಗರದ ದರ್ಬಾರ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಆದರೆ ಬಿಜೆಪಿ ಪಕ್ಷದಲ್ಲಿ ಭಾರತ ಮಾತಾ ಕಿ ಜೈ ಎನ್ನಲು ಯಾರ ಅನುಮತಿ ಬೇಕಿಲ್ಲ. ಎಲ್ಲೆಡೆ ಭಾರತ ಮಾತಾ ಕಿ ಜೈ ಎಂಬ ಘೋಷಣೆ ಕೇಳಿ ಬರಬೇಕು ಎಂದರು.
ದೇಶದಲ್ಲಿ ಬಿಜೆಪಿ ಗೆದ್ದರೆ ಭಾರತ ಮಾತಾಕಿ ಜೈ, ಕಾಂಗ್ರೆಸ್ ಗೆದ್ದರೆ ಪಾಕಿಸ್ತಾನಕ್ಕೆ ಹುಟ್ಟಿದ ಡ್ಯಾಶ್ ಡ್ಯಾಶ್ ಅವರು ಹೇಳುತ್ತಾರೆ. ಇದನ್ನು ಶಾಸಕ ಯತ್ನಾಳ ಬಹಳ ಚನ್ನಾಗಿ ಹೇಳುತ್ತಾರೆ ಎಂದ ರವಿ, ನೆರೆದ ಜನರ ಎರಡೂ ಕೈಮುಷ್ಟಿ ಕಟ್ಟಿಸಿ ಮೇಲೆತ್ತಿ ಭಾರತ ಮಾತಾಕಿ, ಹರ ಹರ ಮಹಾದೇವ, ಬಸವಣ್ಣ, ಕನಕದಾಸ, ವಾಲ್ಮೀಕಿ, ಅಂಬೇಡ್ಕರ್ ಪರ ಜಯ ಘೋಷಣೆ ಹಾಕಿಸಿದರು.
ಈ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ಮನೆಗೆ ಹೋಗಿ ಬಾಂಬ್ ಹಾಕಬೇಡಿ, ಬದಲಾಗಿ ದೇಶದ ಕುರಿತು ಮನವರಿಕೆ ಮಾಡಿಕೊಡಿ. ದೇಶ ಉಳಿಸಲು ಬಿಜೆಪಿಗೆ ಮತ ಹಾಕಿ ಎಂದು ಮನವೋಲಿಸಿ ಎಂದು ಮನವಿ ಮಾಡಿದರು.
ಕೇಂದ್ರದಲ್ಲಿ 2004 ರಿಂದ 2014 ರವರೆಗೆ ಆಡಳಿತ ನಡೆಸಿದ ಕಾಂಗ್ರೆಸ್ನವರು ಆಕಾಶ, ಭೂಮಿ, ಪಾತಾಳದಲ್ಲೂ ಲೂಟಿ ಹೊಡೆದರು. ಆದರೆ ಮೋದಿ ನೇತೃತ್ವದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಹಗರಣ ರಹಿತ ಆಡಳಿತದ ಮೂಲಕ ಮಾಡಿದ ಸಾಧನೆ ಜನತೆಯ ಮುಂದಿದೆ. ಭವಿಷ್ಯದಲ್ಲೂ ದೇಶಕ್ಕೆ ಮೋದಿ ಗ್ಯಾರಂಟಿ ಎಂದರು.