ಬೆಳಗಾವಿ: ಕಾಲು- ಬಾಯಿ ಬೇನೆ; ಬೇಕಿದೆ ಅರಿವು
ಬೆಳಗಾವಿ: ಜಿಲ್ಲೆಯ ದನಗಳಿಗೆ ಕಾಲುಬಾಯಿ ರೋಗ ಬಾರದಂತೆ ಮುಂಜಾಗ್ರತಾ ಕ್ರಮವಾಗಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಲಸಿಕಾಕರಣ ನಡೆಸಿದೆ. ಏ.1ರಿಂದ ಲಸಿಕೆ ನೀಡಲು ಶುರು ಮಾಡಿದ್ದು 30 ದಿನಗಳವರೆಗೆ ನೀಡುವ ಗುರಿ ಹೊಂದಲಾಗಿದೆ. ಆದರೆ, ಒಂದೆಡೆ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ, ಇನ್ನೊಂದೆಡೆ ಜಿಲ್ಲೆಯ ವ್ಯಾಪ್ತಿ ದೊಡ್ಡದಿರುವುದು ಲಸಿಕಾಕರಣಕ್ಕೆ ತುಸು ಅಡ್ಡಿಯಾಗಿದೆ.
ಕೊರತೆಗಳನ್ನು ಮೀರಿಯೂ ಇಲಾಖೆಯಿಂದ ಲಸಿಕಾ ಅಭಿಯಾನ ನಡೆಸಲಾಗಿದೆ.
ಪ್ರತಿ ಬಾರಿ ಬೇಸಿಗೆಯಲ್ಲಿ ಕಾಲು- ಬಾಯಿ ರೋಗ ಅಥವಾ ಗೊರಸು- ಬಾಯಿ ರೋಗ ಹರಡುವುದು ಸಾಮಾನ್ಯ. ಮಾರ್ಚ್ ಕೊನೆಯ ವಾರದ ಹೊತ್ತಿಗೆ ಹುಟ್ಟು ಈ ರೋಗದ ವೈರಾಣುಗಳು ದನಗಳ ಕಾಲು ಹಾಗೂ ಬಾಯಿಗೆ ದೊಡ್ಡ ಹುಣ್ಣು ಮಾಡುತ್ತವೆ. ಇದೇ ಕಾರಣಕ್ಕೆ ಇದನ್ನು ಕಾಲು- ಬಾಯಿ ಬೇನೆ ಎಂದೇ ಕರೆಯಲಾಗುತ್ತದೆ. ಯಾವುದಾದರೂ ದನ ಐದಾರು ದಿನಗಳವರೆಗೆ ಜ್ವರದಿಂದ ಬಳಲಿದರೆ ಅದು ಕಾಲ-ಬಾಯಿ ಬೇನೆಯ ಲಕ್ಷಣ ಎಂಬುದು ಅಧಿಕಾರಿಗಳ ಮಾಹಿತಿ.
ಈ ವೈರಾಣುವಿನಿಂದ ಬಳಲುವ ದನಗಳು ಕುಂಟುತ್ತವೆ. ಅದು ಪ್ರಾಥಮಿಕ ಲಕ್ಷಣ ಎಂದು ಪರಿಗಣಿ ತಕ್ಷಣ ಚಿಕಿತ್ಸೆ ಕೊಡಿಸಬೇಕು. ನಿರ್ಲಕ್ಷ್ಯ ಮಾಡಿದರೆ ದನಗಳು ಕುಂಟಾಗುವ ಸಾಧ್ಯತೆ ಇರುತ್ತದೆ.