ಭಟ್ಕಳ: ನಾನು ಬಹಿರಂಗ ಚರ್ಚೆಗೆ ಸಿದ್ಧಳಿದ್ದೇನೆ. ಬಿಜೆಪಿ ಆಡಳಿತವಿದ್ದರೂ ಖಾನಾಪುರದಲ್ಲಿ ಐದು ವರ್ಷದಲ್ಲಿ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳು, ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಆರು ಅವಧಿಯಲ್ಲಿ ಮಾಡಿದ ಕೆಲಸಗಳನ್ನ ತೋರಿಸಲಿ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಸವಾಲೆಸೆದರು.
ಮಾವಳ್ಳಿ ಜಿಲ್ಲಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಬಡವರು, ರೈತರಿಗೆ ಅನ್ಯಾಯವಾದರೆ ಯಾರಿಗೂ ಬಿಡಲ್ಲ, ಅದು ಎಷ್ಟೇ ದೊಡ್ಡವರಿರಲಿ. ದೇವರ ಮನಸ್ಸಲ್ಲಿ ಹಿಂದೂ- ಮುಸ್ಲಿಂ ಎಂಬ ವ್ಯತ್ಯಾಸವಿಲ್ಲ, ಕಾಂಗ್ರೆಸ್ಗೂ ಇಲ್ಲ. ಆದರೆ ಬಿಜೆಪಿ ರಾಜಕೀಯಕ್ಕಾಗಿ ನಮ್ಮ ನಮ್ಮಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದು, ಮುಂದೆಯೂ ಅದನ್ನೇ ಮಾಡುತ್ತಾರೆ. ಕಾಂಗ್ರೆಸ್ನ ನಾಯಕರು ಹಸ್ತದ ಐದು ಬೆರಳಂತೆ. ಚುನಾವಣೆಯಲ್ಲಿ ಒಂದಾಗಿ ಮುಷ್ಠಿಯಂತೆ ಕೆಲಸ ಮಾಡುತ್ತೇವೆ. ನನಗೆ ಮತ ನೀಡದರೆ ಬಡವರ ಧ್ವನಿಯಾಗಿ ಸಂಸತ್ನಲ್ಲಿ ನಿಮ್ಮ ಪರವಾಗಿ ನಿಲ್ಲುತ್ತೇನೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಇದು ನನ್ನ ಚುನಾವಣೆ. ಬಡವರು, ಸಾಮಾನ್ಯಜನರ ಚುನಾವಣೆ. ಬಿಜೆಪಿಗರು 30 ವರ್ಷಗಳಿಂದ ಸುಳ್ಳು ಹೇಳಿದ್ದನ್ನ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಬಿಜೆಪಿಯೆಂಬ ಕೆಟ್ಟ ಸಂಸ್ಕೃತಿಯನ್ನ ದೇಶದಿಂದಲೇ ಕಿತ್ತೆಸೆಯದಿದ್ದರೆ ಮುಂದೆ ಗಂಡಾಂತರವಿದೆ. ಮೋದಿ ಹೆಸರಲ್ಲಿ ಮತ ಕೇಳುವ ಬಿಜೆಪಿ ಗರಿಗೆ ನಾಚಿಕೆಯಾಗಬೇಕು. ನಾನು ನನ್ನ ಹೆಸರಿನಲ್ಲಿ, ಪಕ್ಷದ ಚಿಹ್ನೆಯಲ್ಲಿ, ನಮ್ಮ ಅಭ್ಯರ್ಥಿಯ ಮುಖ ತೋರಿಸಿ ಮತ ಕೇಳುತ್ತೇವೆ. ನಾವು ಮಾಡಿದ ಕೆಲಸಗಳ ಆಧಾರದಲ್ಲಿ ಮತ ಕೇಳುತ್ತೇವೆ. ಬಿಜೆಪಿಗರು ಬುದ್ಧಿ ಕಲಿಯಬೇಕು, ಸುಳ್ಳು ಹೇಳುವುದನ್ನ ಬಿಡಬೇಕು. ಜನ ನಿಮ್ಮನ್ನ ರಾಜ್ಯದಲ್ಲಿ ತಿರಸ್ಕರಿಸಿದ್ದಾರೆ, ಮುಂದೆ ದೇಶದಲ್ಲೂ ತಿರಸ್ಕರಿಸುವ ದಿನ ಬಂದೇ ಬರುತ್ತದೆ ಎಂದು ವಾಗ್ದಾಳಿ ನಡೆಸಿದರು.
ಕೆಪಿಸಿಸಿ ವಕ್ತಾರ ಸುಧೀರಕುಮಾರ್ ಮಾತನಾಡಿ, ನಾ ಖಾವೂಂಗಾ, ನಾ ಖಾನೇ ದೂಂಗಾ ಎಂದಿದ್ದ ಪ್ರಧಾನಿ ಮೋದಿ, ಬಡಜನರನ್ನ ಬೀದಿಗೆ ತಂದ ಕಂಪನಿಗಳಿಂದ ಚುನಾವಣಾ ಬಾಂಡ್ ಮೂಲಕ ಹಣ ಪಡೆದು ಬಹುದೊಡ್ಡ ಭ್ರಷ್ಟಾಚಾರ ಮಾಡಿದ್ದಾರೆ. ನಮ್ಮ ಆಹಾರ, ನಮ್ಮ ಸಂಸ್ಕೃತಿಯನ್ನ ಆಡಿಕೊಳ್ಳುವ ಬಿಜೆಪಿಗರಿಗೆ ಮತ ನೀಡಬೇಡಿ. ಆಜಾನ್, ಹಲಾಲ್, ಹಿಜಾಬ್ ವಿವಾದಗಳನ್ನ ಬಿಟ್ಟರೆ ಬಿಜೆಪಿ ಮಾಡಿದ್ದೇನಿಲ್ಲ. ಕಾಂಗ್ರೆಸ್ ನುಡಿದಂತೆ ನಡೆದಿದೆ; ಈ ಬಾರಿ ನಮ್ಮ ಅಭ್ಯರ್ಥಿ ಡಾ.ಅಂಜಲಿ ಅವರನ್ನ ಬಹುಮತದಿಂದ ಗೆಲ್ಲಿಸಬೇಕಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್, ವಿಧಾನಸಭಾ ಚುನಾವಣೆಯ ಪೂರ್ವ ನೀಡಿದ್ದ ಐದೂ ಗ್ಯಾರಂಟಿಯನ್ನು ಈಡೇರಿಸಿದ್ದೇವೆ. ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಬಹುಮತ ನೀಡುವ ಮೂಲಕ ಗೆಲ್ಲಿಸಿ ತರಬೇಕು ಎಂದು ಕರೆ ನೀಡಿದರು.