ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಮಾಜಿ ಶಾಸಕ ಸಂಜಯ ಪಾಟೀಲ ಅವರ ಮನೆ ಎದುರು ಕಾಂಗ್ರೆಸ್ ನ ಮಹಿಳಾ ಕಾರ್ಯಕರ್ತೆಯರು ಶನಿವಾರ ರಾತ್ರಿ ಪ್ರತಿಭಟನೆ ನಡೆಸಿ, ಸಂಜಯ ಭಾವಚಿತ್ರಕ್ಕೆ ಬಳೆ, ಸೀರೆ ತೊಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿರುವ ಸಂಜಯ ಪಾಟೀಲ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿದ ನೂರಾರು ಮಹಿಳಾ ಕಾರ್ಯಕರ್ತೆಯರು, ಸಂಜಯ ಪಾಟೀಲ ಅವರು ಕೂಡಲೇ ಮನೆಯಿಂದ ಹೊರಗೆ ಬಂದು ನಾಡಿನ ಎಲ್ಲ ಮಹಿಳೆಯರ ಕ್ಷಮೆ ಕೋರಬೇಕು. ಇಲ್ಲದಿದ್ದರೆ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಬಗ್ಗೆ ಅವಹೇಳನಕರಿಯಾಗಿ ಮಾತನಾಡಿರುವ ಸಂಜಯ ಪಾಟೀಲ ಮಹಿಳಾ ಕುಲಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ, ಸಂಜಯ ಭಾವಚಿತ್ರಕ್ಕೆ ಬೂಟಿನಿಂದ ಹೊಡೆದು, ಸೀರೆ, ಬಳೆ ತೊಡಿಸಿ ಕಿಡಿಕಾರಿದರು.
ಮುಖಂಡರಾದ ಆಯಿಷಾ ಸನದಿ, ಪ್ರಭಾವತಿ ಮಾಸ್ತಮರ್ಡಿ ಸೇರಿದಂತೆ ನೂರಾರು ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.