ಶಿವಮೊಗ್ಗ: ‘ಅಪ್ಪ-ಮಕ್ಕಳ ಕೈಯಲ್ಲಿರುವ ಬಿಜೆಪಿಯನ್ನು ಶುದ್ದೀಕರಣ ಮಾಡಬೇಕು. ಇದಕ್ಕಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಈ ಚುನಾವಣೆ ನಂತರ ರಾಘವೇಂದ್ರ ಸೋತು ಮನೆಗೆ ಹೋಗುತ್ತಾರೆ. ವಿಜಯೇಂದ್ರ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಕಳೆದುಕೊಳ್ಳುತ್ತಾರೆ’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು.
ಇಲ್ಲಿನ ಸೀನಪ್ಪ ಶೆಟ್ಟಿ ವೃತ್ತದಲ್ಲಿ ಶುಕ್ರವಾರ ಬೆಂಬಲಿಗರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಬಿಜೆಪಿ ಸಿದ್ದಾಂತ ಉಳಿವಿಗಾಗಿ ಪ್ರತಿ ಮನೆಗೆ ಹೋಗಿ ನನಗೆ ಮತ ಹಾಕಲು ಹೇಳಿ. ಏ.19ಕ್ಕೆ ನನ್ನ ಸ್ಪರ್ಧೆಯ ಗುರುತು ಬರುತ್ತದೆ. ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ದೆಹಲಿಗೆ ತೆರಳಿ ಕೈ ಎತ್ತಲು ಅವಕಾಶ ಮಾಡಿ ಕೊಡಿ’ ಎಂದು ಮನವಿ ಮಾಡಿದರು.
ಈಶ್ವರಪ್ಪ ಪುತ್ರ ಕೆ.ಈ.ಕಾಂತೇಶ್ ಮಾತನಾಡಿ, ‘ಯಡಿಯೂರಪ್ಪಗೆ ಇಬ್ಬರು ಮಕ್ಕಳು. ಒಬ್ಬ ಸಂಸದ, ಮತ್ತೊಬ್ಬರು ಶಾಸಕ. ಆದರೆ, ನಾನೇನು ತಪ್ಪು ಮಾಡಿದ್ದೆ. ನನಗೆ ಯಾಕೆ ವಿಷ ಹಾಕಿದ್ರಿ, ನನ್ನ ಏಕೆ ಸಾಯಿಸಿದ್ರಿ. ಈಶ್ವರಪ್ಪ ಕೆಜೆಪಿಗೆ ಹೋಗಲಿಲ್ಲ ಅಂತ ಸೇಡು ತೀರಿಸಿಕೊಂಡಿರಾ’ ಎಂದು ಕಿಡಿ ಕಾರಿದರು.
ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟು ಹೋಗಿ ಸೋತರು. ಮತ್ತೆ ವಾಪಸ್ ಬಂದರು. ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ಈಶ್ವರಪ್ಪ ಪಕ್ಷ ಬಿಟ್ಟು ಹೋಗಿಲ್ಲ. ಪಕ್ಷವನ್ನು ತಾಯಿ ಎಂದು ಕರೆಯುತ್ತಾರೆ. ಈ ಬಾರಿ ಈಶ್ವರಪ್ಪರಿಗೆ ಮತ ನೀಡಿ ಹೆಚ್ಚಿನ ಅಂತರದಿಂದ ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.
ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಮಾತನಾಡಿ, ‘ಈಶ್ವರಪ್ಪ ಸ್ಪರ್ಧೆ ಬಗ್ಗೆ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಅವರ ಸ್ಪರ್ಧೆಯ ಉದ್ದೇಶವನ್ನು ನಾನಷ್ಟೇ ಅಲ್ಲ ಬೇರೆ ಬೇರೆ ಪಕ್ಷದ ಕಾರ್ಯಕರ್ತರು ಒಪ್ಪಿ ಅವರಿಗೆ ಬೆಂಬಲ ನೀಡುತ್ತಿದ್ದಾರೆ’ ಎಂದರು.
ಸಭೆಯಲ್ಲಿ ಹಿಂದೂ ಸಂಘಟನಾ ಮುಖಂಡ ಶ್ರೀಧರ್ ಬಿಜ್ಜೂರ್, ಪಾಲಿಕೆ ಮಾಜಿ ಸದಸ್ಯರಾದ ವಿಶ್ವಾಸ್, ಆರತಿ ಆ.ಮ.ಪ್ರಕಾಶ್, ಸುವರ್ಣ ಶಂಕರ್ ಸೇರಿದಂತೆ ಹಲವರು ಇದ್ದರು.