ಬೆಳಗಾವಿ: ‘ಇಲ್ಲಿನ ಕೋನವಾಳ ಗಲ್ಲಿಯ ಲೋಕಮಾನ್ಯ ರಂಗಮಂದಿರದಲ್ಲಿ ಏ.13, 14ರಂದು ಸಂಜೆ 6.30ಕ್ಕೆ ರಾಘವೇಂದ್ರ ಸ್ವಾಮೀಜಿ ಜೀವನಾಧಾರಿತವಾದ ‘ಪರಿಮಳದವರು’ ನಾಟಕ ಪ್ರದರ್ಶನಗೊಳ್ಳಲಿದೆ’ ಎಂದು ರಂಗಸಂಪದ ಅಧ್ಯಕ್ಷ ಅರವಿಂದ ಕುಲಕರ್ಣಿ ಹೇಳಿದರು.
ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲೋಕಮಾನ್ಯ ರಂಗಮಂದಿರದಲ್ಲಿ ಮಾ.29ರಂದು ಈ ನಾಟಕ ಪ್ರದರ್ಶಿಸಿದ್ದೆವು.
ವೀಕ್ಷಣೆಗೆ ಜನರು ಕಿಕ್ಕಿರಿದು ಸೇರಿದ್ದರು. ಇನ್ನೂ ಕೆಲವು ಪ್ರದರ್ಶನ ನೀಡಬೇಕೆಂದು ಒತ್ತಾಯಿಸಿದರು. ಹಾಗಾಗಿ ಈಗ ಮತ್ತೆ ಪ್ರದರ್ಶಿಸುತ್ತಿದ್ದೇವೆ’ ಎಂದರು.
‘ಶ್ರೀಪತಿ ಮಂಜನಬೈಲು ನಿರ್ದೇಶಿಸಿರುವ ಈ ನಾಟಕದಲ್ಲಿ ನಾನು ರಾಘವೇಂದ್ರ ಸ್ವಾಮೀಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪದ್ಮಾ ಕುಲಕರ್ಣಿ, ಪವಿತ್ರಾ ರೇವಣಕರ, ಸ್ನೇಹಾ ಜೋಶಿ ಮತ್ತಿತರರು ಅಭಿನಯಿಸಿದ್ದಾರೆ. ಪ್ರೇಕ್ಷಕರು ಉಚಿತವಾಗಿ ನಾಟಕ ವೀಕ್ಷಿಸಿ ಪ್ರೋತ್ಸಾಹಿಸಬೇಕು’ ಎಂದು ಮನವಿ ಮಾಡಿದರು.
ಡಾ.ಅರವಿಂದ ಕುಲಕರ್ಣಿ, ರಾಮಚಂದ್ರ ಕಟ್ಟಿ, ಪ್ರಸಾದ ಕಾರಜೋಳ, ದಿಲೀಪ ಮಳಗಿ ಇದ್ದರು.