ಸಿಂದಗಿ (ವಿಜಯಪುರ ಜಿಲ್ಲೆ): ವಾಸಿಸಲು ಮನೆಯಿಲ್ಲ, ಉಪಜೀವನಕ್ಕೆ ಕೂಲಿ ಕೆಲಸ. ನಿತ್ಯ ಬೆಳಿಗ್ಗೆ ಸಿಕ್ಕರೆ ಕೂಲಿಗೆಲಸಕ್ಕೆ ಹೋಗುವುದು, ಇಲ್ಲದಿದ್ದರೆ ಗುಡಿಸಲಲ್ಲೇ ವಾಸ. ನೈವೇದ್ಯದ ಪ್ರಸಾದ ಅಥವಾ ಯಾರಾದರೂ ಆಹಾರ ಕೊಟ್ಟರೆ ಅದೇ ಊಟ. ಇಲ್ಲದಿದ್ದರೆ, ಉಪವಾಸ. ವೃದ್ಧಾಪ್ಯವೇತನ ಕೂಡ ಇತ್ತೀಚೆಗೆ ಅವರ ಕೈಸೇರಿಲ್ಲ…
ಇದು ವಿಜಯಪುರ ಜಿಲ್ಲೆ ಸಿಂದಗಿಯಲ್ಲಿರುವ 23ನೇ ವಾರ್ಡ್ನ ಪುರಸಭೆ ಕಾಂಗ್ರೆಸ್ ಸದಸ್ಯೆ ಮಹಾದೇವಿ ಭೀಮಶ್ಯಾ ನಾಯ್ಕೋಡಿ (80) ಅವರ ಸ್ಥಿತಿ.
ಮಹಾದೇವಿ ನಾಯ್ಕೋಡಿ ಅವರನ್ನು ಅವರ ಪುತ್ರ ಮಹಾಂತೇಶ ನಾಯ್ಕೋಡಿ ಚುನಾವಣೆಗೆ ನಿಲ್ಲಿಸಿ, 23ನೇ ವಾರ್ಡ್ನಿಂದ ಸ್ಪರ್ಧಿಸುವಂತೆ ಮಾಡಿ, ಗೆಲುವಿಗೆ ಶ್ರಮಿಸಿದ್ದ. ಸದ್ಯ ಮಹಾಂತೇಶ ಮಹಾರಾಷ್ಟ್ರಕ್ಕೆ ದುಡಿಯಲು ಗುಳೆ ಹೋಗಿದ್ದಾರೆ.
’23ನೇ ವಾರ್ಡ್ನಲ್ಲಿ ಅನಕ್ಷರಸ್ಥರೇ ಹೆಚ್ಚಿದ್ದಾರೆ. ಅವರ ಮತಗಳಿಂದ ಮಹಾದೇವಿ ಜಯ ಗಳಿಸಿದರು. ಪುರಸಭೆಯಿಂದ ಆಶ್ರಯ ಯೋಜನೆಯಡಿ ನಿರ್ಗತಿಕರಿಗೆ ನಿವೇಶನ ನೀಡುವ ಸದಸ್ಯೆಗೆ ನಿವೇಶನ ಇಲ್ಲ. ಪುರಸಭೆ ಸಾಮಾನ್ಯ ಸಭೆ ಇದ್ದಾಗ ಸಿಗುವ ಗೌರವ ಧನವೂ ಈಗ ವರ್ಷದಿಂದ ಸ್ಥಗಿತಗೊಂಡಿದೆ.
‘ನನಗೆ ಮೂವರು ಪುತ್ರರು ಇದ್ದರೂ ಒಬ್ಬರೂ ಜೊತೆಗಿಲ್ಲ. ಒಬ್ಬ ಮಗ ಸಾಲ ಮಾಡಿ ಮಹಾರಾಷ್ಟ್ರಕ್ಕೆ ಗುಳೆ ಹೋದರೆ, ಇನ್ನೊಬ್ಬ ಮಗ ಬೇರೊಂದು ಊರಲ್ಲಿದ್ದಾನೆ. ಮತ್ತೊಬ್ಬ ಅತ್ತೆ ಮನೆಯಲ್ಲಿದ್ದಾನೆ’ ಎಂದು ಮಹಾದೇವಿ ತಿಳಿಸಿದರು.