ಗ್ರಾಮದ ಚಾಂಗದೇವರ ಜಾತ್ರೆಯೇ ಒಂದು ವಿಶೇಷ. ನೂರಾರು ವರ್ಷಗಳ ಹಿಂದೆ ಚಾಂಗದೇವ ಈ ಗ್ರಾಮದಲ್ಲಿ ನೆಲೆಸಿದ್ದ ಅನ್ನೋ ಪ್ರತೀತಿ ಇದೆ. ಅವತಾರ ಪುರುಷನಾಗಿದ್ದ ಆತ ಸಂತ ಪರಂಪರೆಯ ಮಹಾಜ್ಞಾನಿಯಾಗಿ ಸಂಚರಿಸುತ್ತಾ, ಹಿಂದೂ-ಮುಸ್ಲಿಮರಲ್ಲಿ ಭಾವೈಕ್ಯತೆಯನ್ನು ಮೂಡಿಸಿದ. ಇಂಥ ಮಹಿಮಾ ಪುರುಷನ ಸ್ಮರಣೆಗಾಗಿ ಇಂದಿಗೂ ಜಾತ್ರೆಯನ್ನು ಮಾಡಲಾಗುತ್ತಿದೆ. ಒಂದು ಕಡೆ ದೇವಸ್ಥಾನವಿದ್ದರೆ, ಮತ್ತೊಂದು ಭಾಗದಲ್ಲಿ ಮಸೀದಿ ಇರೋದೇ ಇಲ್ಲಿಯ ವಿಶೇಷತೆ. ದೇವಸ್ಥಾನದಲ್ಲಿ ಚಾಂಗದೇವ ಪ್ರತಿಷ್ಠಾಪಿಸಿದ ಉಗ್ರ ನರಸಿಂಹ ದೇವ ಸಾಲಿಗ್ರಾಮಕ್ಕೆ ವಿಶೇಷ ಪೂಜೆ ಮಾಡಲಾಗುತ್ತೆ. ಜಾತ್ರೆಗೆ ಲಕ್ಷಾಂತರ ಜನರು ಆಗಮಿಸಿ, ಚಾಂಗದೇವನ ದರ್ಶನ ಪಡೆಯುತ್ತಾರೆ.
ಜಾತ್ರೆಯ ಮೊದಲ ದಿನ ಚಾಂಗದೇವನಿಗೆ ಗಂಧಾಭಿಷೇಕ ಮಾಡಲಾಗುತ್ತದೆ. ಬಳಿಕ ಬೆಣ್ಣೆ ಹಳ್ಳದ ನೀರಿನಿಂದಲೇ ಸಂತರು ದೀಪ ಬೆಳಗಿಸಿ ಪವಾಡ ಮೆರೆಯುತ್ತಾರೆ ಅನ್ನೋ ನಂಬಿಕೆ. ಇದನ್ನು ನೋಡಲು ಹೊರ ರಾಜ್ಯದಿಂದಲೂ ಭಕ್ತರು ಆಗಮಿಸುತ್ತಾರೆ. ಬೆಣ್ಣೆ ಹಳ್ಳದಿಂದ ಮೆರವಣಿಗೆ ಮೂಲಕ ನೀರನ್ನು ತರೋ ಸಂತರು, ಅದೇ ನೀರಿನಿಂದ ದೇವಸ್ಥಾನದಲ್ಲಿರೋ ದೀಪವನ್ನು ಬೆಳಗಿಸುತ್ತಾರೆ ಅನ್ನೋ ನಂಬಿಕೆ ಇದೆ.
ಇನ್ನು ಈ ಬೆಣ್ಣೆ ಹಳ್ಳದ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮ ರೋಗ ನಿವಾರಣೆ ಆಗುತ್ತೆ ಅನ್ನೋ ನಂಬಿಕೆಯ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇದೇ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಈ ಬಾರಿ ಮಳೆಯ ಕೊರತೆಯಿಂದಾಗಿ ಹಳ್ಳದಲ್ಲಿ ನೀರಿರದಿದ್ದರೂ ನಿಂತ ಕೊಂಚ ನೀರಿನಲ್ಲಿಯೇ ಭಕ್ತರು ಸ್ನಾನ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಆದರೂ ಭಕ್ತರು ಭಾವಪರವಶರಾಗಿ ಸ್ನಾನ ಮಾಡಿದ್ದು, ವಿಶೇಷವಾಗಿತ್ತು. ಇನ್ನು ಭಕ್ತರು ಸ್ನಾನ ಮಾಡಿದ ಬಳಿಕ ಹಳೆಯ ಬಟ್ಟೆಯನ್ನು ಅದೇ ಹಳ್ಳದಲ್ಲಿಯೇ ಬಿಟ್ಟು ಹೋಗಬೇಕು ಅನ್ನೋದು ನಿಯಮ.